ಬೆಂಗಳೂರು: ಕನ್ನಡ ಪುಸ್ತಕ ಪ್ರಾಧಿಕಾರ ನೀಡುವ ಡಾ. ಅನುಪಮಾ ನಿರಂಜನ ವೈದ್ಯಕೀಯ ಮತ್ತು ವಿಜ್ಞಾನ ಸಾಹಿತ್ಯ ಪ್ರಶಸ್ತಿ ಪಡೆಯಲು ಅನೇಕ ಅರ್ಹ ವೈದ್ಯರು ಇದ್ದರೂ, ಈ ಬಾರಿಯ ಪ್ರಶಸ್ತಿ ವೈದ್ಯಕೀಯ ಸಾಹಿತ್ಯ ಕ್ಷೇತ್ರಕ್ಕೆ ಹೊರತಾದವರಿಗೆ ಸಂದಿದೆ ಎಂದು ವೈದ್ಯ ಸಾಹಿತಿಗಳ ಗುಂಪು ಬೇಸರ ವ್ಯಕ್ತಪಡಿಸಿದೆ.
ಈ ಬಾರಿಯ ಪ್ರಶಸ್ತಿಗೆ ಶಿವಮೊಗ್ಗದ ಇ.ಟಿ. ಪುಟ್ಟಯ್ಯ ಅವರು ಪಾತ್ರರಾಗಿದ್ದಾರೆ. ‘ಈ ಪ್ರಶಸ್ತಿಗೆ ಅರ್ಹರನ್ನು ಆಯ್ಕೆ ಮಾಡುವ ಮುನ್ನ ವೈದ್ಯ ಸಾಹಿತ್ಯ ಪರಿಷತ್ತು, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ಮತ್ತಿತರ ಸಂಸ್ಥೆಗಳ ಅಭಿಪ್ರಾಯ ಪಡೆಯಬಹುದಿತ್ತು. ಆದರೆ ಪ್ರಾಧಿಕಾರ ಹಾಗೆ ಮಾಡಿದಂತೆ ಕಾಣುತ್ತಿಲ್ಲ. ಪರಿಣಾಮವಾಗಿ, ಈ ಬಾರಿಯ ಪ್ರಶಸ್ತಿ ವೈದ್ಯ ಸಾಹಿತಿಯಲ್ಲದವರಿಗೆ ಸಂದಿದೆ ಎಂದು ವೈದ್ಯ ಸಾಹಿತಿಗಳ ಗುಂಪು ಪತ್ರಿಕಾ ಪ್ರಕಟಣೆಯಲ್ಲಿ ಹೇಳಿದೆ.
ಡಾ.ಸಿ.ಆರ್. ಚಂದ್ರಶೇಖರ್, ಡಾ. ಲೀಲಾವತಿ ದೇವದಾಸ್, ಡಾ.ಪಿ.ಎಸ್. ಶಂಕರ್, ಡಾ. ವಸುಂಧರಾ ಭೂಪತಿ, ಡಾ. ಪದ್ಮಿನಿ ಪ್ರಸಾದ್, ಡಾ. ಪ್ರಕಾಶ್ ಸಿ. ರಾವ್, ಡಾ.ಎಚ್. ಗಿರಿಜಮ್ಮ, ಡಾ.ನಾ. ಸೋಮೇಶ್ವರ, ಡಾ.ಎನ್. ಗೋಪಾಲಕೃಷ್ಣ, ಎನ್. ವಿಶ್ವರೂಪಾಚಾರ್ ಮತ್ತು ಡಾ.ಕೆ.ಆರ್. ಶ್ರೀಧರ್ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಪ್ರಾಧಿಕಾರದ ಅಧ್ಯಕ್ಷ ಡಾ. ಬಂಜಗೆರೆ ಜಯಪ್ರಕಾಶ್ ಅವರನ್ನು ಈ ಪತ್ರದ ಕುರಿತು ಸಂಪರ್ಕಿಸಿದಾಗ, ‘ಈ ಪ್ರಶಸ್ತಿಯನ್ನು ವೈದ್ಯಕೀಯ ಮತ್ತು ವಿಜ್ಞಾನ ಸಾಹಿತ್ಯಕ್ಕೆ ನೀಡಿದ ಕೊಡುಗೆ ಆಧರಿಸಿ ನೀಡಲಾಗುತ್ತದೆ. ಪುಟ್ಟಯ್ಯ ಅವರು 12ಕ್ಕೂ ಹೆಚ್ಚು ಕೃತಿಗಳನ್ನು ಪರಿಸರ ವಿಜ್ಞಾನದ ಕುರಿತು ರಚಿಸಿದ್ದಾರೆ’ ಎಂದು ತಿಳಿಸಿದರು.