ಬೆಂಗಳೂರು: `ರಾಜಾಜಿನಗರದ ವೈದ್ಯಕೀಯ ಕಾಲೇಜನ್ನು ಶೀಘ್ರದಲ್ಲೇ ಆರಂಭಿಸಲಾಗುತ್ತದೆ~ ಎಂದು ಕೇಂದ್ರ ಕಾರ್ಮಿಕ ಸಚಿವ ಮಲ್ಲಿಕಾರ್ಜುನ ಖರ್ಗೆ ಸೋಮವಾರ ಹೇಳಿದರು.
ಕಾರ್ಮಿಕರ ರಾಜ್ಯ ವಿಮಾ ನಿಗಮವು ಬೆಂಗಳೂರಿನ ಪೀಣ್ಯದಲ್ಲಿ ನಿರ್ಮಿಸಿರುವ ಆಸ್ಪತ್ರೆಯ ಉದ್ಘಾಟನೆ ಮಾಡಿದ ನಂತರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು. ರಾಜಾಜಿನಗರದ ವೈದ್ಯಕೀಯ ಕಾಲೇಜಿನಲ್ಲಿ ಸ್ನಾತಕೋತ್ತರ ಕೋರ್ಸ್ ಈಗಾಗಲೇ ಆರಂಭಿಸಲಾಗಿದೆ.
ವೈದ್ಯಕೀಯ ಪದವಿ ಕೋರ್ಸ್ ಆರಂಭಿಸಲು ಕ್ರಮ ಕೈಗೊಳ್ಳಲಾಗುತ್ತದೆ. ಹುಬ್ಬಳ್ಳಿ- ಧಾರವಾಡದ ಬೀಡಿ ಕಾರ್ಮಿಕರಿಗೆ 1.60 ಲಕ್ಷ ರೂಪಾಯಿ ವೆಚ್ಚದಲ್ಲಿ ನಾನೂರು ಮನೆಗಳನ್ನು ನಿರ್ಮಿಸಿ ಕೊಡಲಾಗುತ್ತದೆ ಎಂದು ಹೇಳಿದರು.
ಕೇಂದ್ರ ಯೋಜನೆಗಳಿಗೆ ರಾಜ್ಯ ಸರ್ಕಾರ ಭೂಮಿ ಮಂಜೂರು ಮಾಡುತ್ತಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು `ರಾಜ್ಯ ಸರ್ಕಾರ ಭೂಮಿ ನೀಡುತ್ತಿದೆ. ಆದರೆ ಪ್ರಕ್ರಿಯೆಗಳು ನಿಧಾನವಾಗುತ್ತಿವೆ. ಆದ್ದರಿಂದ ಒಮ್ಮೆಲೇ ಒಪ್ಪಿಗೆ ನೀಡುವಂತಹ ಏಕ ಗವಾಕ್ಷಿ ಪದ್ಧತಿ ಜಾರಿಗೆ ತರಲು ಸಲಹೆ ನೀಡಿದ್ದೇನೆ. ಎಲ್ಲ ಇಲಾಖೆಗಳ ಅಧಿಕಾರಿಗಳ ಸಭೆ ನಡೆಸಿ ಒಮ್ಮೆಗೆ ಒಪ್ಪಿಗೆ ನೀಡಿದರೆ ಅನುಕೂಲವಾಗುತ್ತದೆ ಎಂದರು.
ಕೆಟ್ಟ ಹೆಸರು ಬಂದಿದೆ: ಸಚಿವರು ಸದನದಲ್ಲಿ ಬ್ಲೂ ಫಿಲಂ ವೀಕ್ಷಿಸಿದ ಪ್ರಕರಣದಿಂದ ರಾಜ್ಯಕ್ಕೆ ಕೆಟ್ಟ ಹೆಸರು ಬಂದಿದೆ. ಸದನದ ಹೊರಗೆ ಮತ್ತು ಒಳಗೆ ಮಾದರಿ ನಡವಳಿಕೆ ತೋರಬೇಕಿದ್ದ ಸಚಿವರು ಈ ರೀತಿ ಮಾಡಿರುವುದು ದುರ್ದೈವದ ಸಂಗತಿ. ತಪ್ಪಿತ್ತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು. ಸದನದಲ್ಲಿಯೇ ಅವರಿಗೆ ಶಿಕ್ಷೆ ನೀಡಬೇಕು. ಸದನದ ಒಳಗೆ ಮೊಬೈಲ್ ತೆಗೆದುಕೊಂಡು ಹೋಗುವುದನ್ನು ನಿಷೇಧಿಸಬೇಕು ಎಂದು ಖರ್ಗೆ ಹೇಳಿದರು.