ಬೆಂಗಳೂರು: `ಪದ್ಮನಾಭನಗರ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಸಾಕಷ್ಟು ಕಾರ್ಯಕ್ರಮಗಳನ್ನು ಜಾರಿಗೊಳಿಸಲಾಗುತ್ತಿದೆ. ಹಿರಿಯರ ಸಲಹೆ, ಮಾರ್ಗದರ್ಶನ ಪಡೆದು ಅಗತ್ಯ ಸೌಲಭ್ಯ ಕಲ್ಪಿಸಲಾಗುವುದು~ ಎಂದು ಸಚಿವ ಆರ್. ಅಶೋಕ ಹೇಳಿದರು.
ಬನಶಂಕರಿ 2ನೇ ಹಂತದಲ್ಲಿರುವ ಶಾಸಕರ ಕಚೇರಿಯಲ್ಲಿ ಮಂಗಳವಾರ ನಡೆದ ಕಾರ್ಯಕ್ರಮದಲ್ಲಿ ಬನಶಂಕರಿ ದೇವಸ್ಥಾನ ವಾರ್ಡ್ ವ್ಯಾಪ್ತಿಯ ಅರ್ಹ ಫಲಾನುಭವಿಗಳಿಗೆ ವೈದ್ಯಕೀಯ ವೆಚ್ಚದ ಪರಿಹಾರ ಧನದ ಚೆಕ್ ವಿತರಿಸಿ ಅವರು ಮಾತನಾಡಿದರು.
`ಕ್ಷೇತ್ರದ ಅಭಿವೃದ್ಧಿ ದೃಷ್ಟಿಯಿಂದ ಹಿರಿಯರು ಸಲಹೆ ನೀಡಬೇಕು. ಲೋಪಗಳು ಉಂಟಾದಾಗ ಅದನ್ನು ತಿದ್ದಬೇಕು. ಅವರ ಮಾರ್ಗದರ್ಶನ ಪಡೆದು ಇನ್ನಷ್ಟು ಅಭಿವೃದ್ಧಿ ಕಾರ್ಯ ಕೈಗೊ ಳ್ಳಲು ಪ್ರಯತ್ನಿಸುವುದಾಗಿ~ ತಿಳಿಸಿದರು.
`ಈ ಭಾಗದ ಸಾಹಿತ್ಯ ಪ್ರಿಯರು ಗ್ರಂಥಾಲಯಕ್ಕಾಗಿ ಜಯನಗರಕ್ಕೆ ಹೋಗಬೇಕಿತ್ತು. ಅವರ ಅನುಕೂಲಕ್ಕಾಗಿ ಶಾಸಕರ ಕಚೇರಿ ಸಮೀಪವೇ ಗ್ರಂಥಾಲಯ ನಿರ್ಮಿಸಲಾಗುವುದು. ಹಾಗೆಯೇ ಯುವಕರಿಗೆಂದು ವ್ಯಾಯಾಮ ಶಾಲೆ ಆರಂಭಿಸಲಾಗುವುದು~ ಎಂದು ಹೇಳಿದರು.
`ಕ್ಷೇತ್ರದ ಮೂರು ಕಡೆಗಳಲ್ಲಿ ವಿಶಾಲವಾದ ಉದ್ಯಾನ ನಿರ್ಮಿಸಲಾಗುತ್ತಿದೆ. ಅರ್ಹ ಬಡ ಜನರ ವೈದ್ಯಕೀಯ ವೆಚ್ಚಕ್ಕಾಗಿ 5,000 ರೂಪಾಯಿಯಿಂದ 70,000 ರೂಪಾಯಿವರೆಗೆ ಪರಿಹಾರ ಧನ ನೀಡಲಾಗುತ್ತಿದೆ~ ಎಂದರು.
ಸ್ಥಳೀಯ ಪಾಲಿಕೆ ಸದಸ್ಯ ಎ.ಎಚ್. ಬಸವರಾಜ್, `ವಾರ್ಡ್ ವ್ಯಾಪ್ತಿಯಲ್ಲಿರುವ ಬಡ ಜನರ ವೈದ್ಯಕೀಯ ಚಿಕಿತ್ಸೆಗೆ ನೆರವು ನೀಡಲಾಗುತ್ತಿದೆ. ಎಲ್ಲ ವರ್ಗದ ಜನರಿಗೆ ಅಗತ್ಯ ಸೌಲಭ್ಯ ಕಲ್ಪಿಸಲು ಪ್ರಯತ್ನಿಸಲಾಗುವುದು~ ಎಂದರು.
ಪಾಲಿಕೆ ವತಿಯಿಂದ 45 ಮಂದಿಗೆ ಒಟ್ಟು 9.20 ಲಕ್ಷ ರೂಪಾಯಿ ವೈದ್ಯಕೀಯ ನೆರವು ನೀಡಲಾಯಿತು. ನಿಟ್ಟಿಂಗ್ ತರಬೇತಿ ಪಡೆದ 23 ಮಹಿಳೆಯರಿಗೆ ತಲಾ 600 ರೂಪಾಯಿಯಂತೆ ಒಟ್ಟು 13,800 ರೂಪಾಯಿ ಸಹಾಯ ಧನ ವಿತರಿಸಲಾಯಿತು. ಆರು ಮಂದಿ ಫಲಾನುಭವಿಗಳಿಗೆ ಆಟೊರಿಕ್ಷಾ ನೀಡಲಾಯಿತು.