ಬೀಳಗಿ: ತಾಲ್ಲೂಕಿನ ಗಿರಿಸಾಗರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಒಂದೂವರೆ ತಿಂಗಳಿನಿಂದ ವೈದ್ಯರು ಇಲ್ಲದೇ ಇರುವುದನ್ನು ಪ್ರತಿಭಟಿಸಿ, ಗ್ರಾಮಸ್ಥರು ಹಾಗೂ ಲಿಂಗಾರೂಢ ಯುವಕ ಮಂಡಳದ ಸದಸ್ಯರು ಸೋಮವಾರ ಆಸ್ಪತ್ರೆಗೆ ಬೀಗ ಜಡಿದು ಪ್ರತಿಭಟನೆ ನಡೆಸಿದರು.
ಇಲ್ಲಿರುವ ವೈದ್ಯರು ಒಂದೂವರೆ ತಿಂಗಳಿನಿಂದ ರಜೆಯ ಮೇಲಿದ್ದರೂ ಮೇಲಾಧಿಕಾರಿಗಳು ಪರ್ಯಾಯ ವ್ಯವಸ್ಥೆ ಕಲ್ಪಿಸದೇ ಇರುವುದರಿಂದ ಗಿರಿಸಾಗರ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರಿಗೆ ವೈದ್ಯಕೀಯ ಉಪಚಾರಕ್ಕಾಗಿ ತುಂಬಾ ತೊಂದರೆಯಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಸ್ಥಳಕ್ಕೆ ಭೇಟಿ ನೀಡಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಆರ್.ಬಿ. ಚೌಧರಿ, ತಾಲ್ಲೂಕು ವೈದ್ಯಾಧಿಕಾರಿ ಡಾ. ಜಯಶ್ರೆ ಎಮ್ಮಿ, ತಹಸೀಲ್ದಾರ್ ಎಲ್.ಬಿ. ಕುಲಕರ್ಣಿ ಶೀಘ್ರವೇ ಪರ್ಯಾಯ ವ್ಯವಸ್ಥೆ ಕಲ್ಪಿಸುವುದಾಗಿ ಭರವಸೆ ನೀಡಿದರು.