ನೆಲಮಂಗಲ: ವೈದ್ಯ ವೃತ್ತಿಯ ಪಾವಿತ್ರ್ಯ ಹೆಚ್ಚಿಸಿಕೊಂಡು ರೋಗಿಗಳ ಸೇವೆ ಭಗವಂತನ ಸೇವೆ ಎಂದು ಭಾವಿಸಿದಾಗ ವಿವಾದಗಳಿಗೆ ಆಸ್ಪದವಿರುವುದಿಲ್ಲ ಎಂದು ರಾಜ್ಯ ವೈದ್ಯ ಸಂಘದ ಅಧ್ಯಕ್ಷ ಡಾ.ಎಚ್.ಎಲ್.ಕೃಷ್ಣೇಗೌಡ ಅಭಿಪ್ರಾಯಪಟ್ಟರು.
ಸ್ಥಳೀಯ ಭಾರತೀಯ ವೈದ್ಯ ಸಂಘವು ಆಯೋಜಿಸಿದ್ದ ವೈದ್ಯಕೀಯ ವಿವಾದ ಕುರಿತ ವಿಚಾರಗೋಷ್ಠಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, 2015ರ ವೇಳೆಗೆ ಗ್ರಾಮೀಣ ಪ್ರದೇಶದವರಿಗೂ ತಜ್ಞ ವೈದ್ಯಕೀಯ ಸೇವೆ ಲಭ್ಯವಾಗುವಂತಹ ಯೋಜನೆಯನ್ನು ಜಾರಿಗೆ ತರಲು ಸರ್ಕಾರಕ್ಕೆ ಸಂಘದ ವತಿಯಿಂದ ಪ್ರಸ್ತಾವ ಸಲ್ಲಿಸಲಾಗಿದೆ ಎಂದರು.
ವೃತ್ತಿ ಸಂರಕ್ಷಣಾ ಯೋಜನೆಯ ಅಧ್ಯಕ್ಷ ಡಾ.ಡಿ.ಸೋಮಶೇಖರಯ್ಯ ಡಿವೈಎಸ್ಪಿ ಕೆ.ಎಂ.ಚಿನ್ನಸ್ವಾಮಿ, ಸಂಘದ ಮಾಜಿ ಅಧ್ಯಕ್ಷ ಡಾ.ಗೋವಿಂದರಾಜುಲು, ಪ್ರಾಧ್ಯಾಪಕ ಡಾ.ಜೆ.ಕಿರಣ್ ಮಾತನಾಡಿದರು. ಸಂಘದ ನೆಲಮಂಗಲ ಘಟಕದ ಅಧ್ಯಕ್ಷ ಡಾ.ಎಂ.ಜಯಪ್ರಸಾದ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಡಾ.ಎಸ್.ರಾಜೇಂದ್ರಪ್ರಸಾದ್ ಸ್ವಾಗತಿಸಿದರು. ಖಜಾಂಚಿ ಡಾ.ವಸಂತಕುಮಾರ್ ವಂದಿಸಿದರು.