ಬಸವಾಪಟ್ಟಣ: ಇಲ್ಲಿನ ಹಾಲಸ್ವಾಮಿ ಗವಿಮಠದಲ್ಲಿ ಹಮ್ಮಿಕೊಂಡ, 21 ದಿನಗಳ ಶಿವಯೋಗಾನುಷ್ಠಾನದ ಅಂಗವಾಗಿ ಸೋಮವಾರ ಕುಂಭಾಭಿಷೇಕದ ನಿಮಿತ್ತ ಇಲ್ಲಿನ ಭದ್ರಾ ನಾಲೆಯಿಂದ ಗವಿಮಠದ ವರೆಗೆ ಕುಂಭೋತ್ಸವ ವಿಜೃಂಭಣೆಯಿಂದ ನಡೆಯಿತು.
ಪವಿತ್ರ ಕಲಶಗಳನ್ನು ಹೊತ್ತ ನೂರಾರು ಮಹಿಳೆಯರು ಸ್ವಾಮೀಜಿಯವರ ನೇತೃತ್ವದಲ್ಲಿ ಮೆರವಣಿಗೆಯಲ್ಲಿ ಸಾಗಿದರು. ನಂತರ ಪವಿತ್ರ ಜಲದಿಂದ ಹಾಲಸ್ವಾಮಿಗಳ ಪಾದುಕೆಗಳಿಗೆ ಅಭಿಷೇಕ ನೆರವೇರಿಸಲಾಯಿತು. ಬೆಳಿಗ್ಗೆ ಬ್ರಾಹ್ಮೀ ಮುಹೂರ್ತದಲ್ಲಿ ಸ್ವಾಮೀಜಿ ಅವರು ಉಚಿತ ಸಾಮೂಹಿಕ ವಿವಾಹಗಳನ್ನು ನಡೆಸಿಕೊಟ್ಟರು.
ನಂತರ ವಧೂ-ವರರನ್ನು ಆಶೀರ್ವದಿಸಿದ ಸ್ವಾಮೀಜಿ, ಇಂತಹ ಉಚಿತ ಸಾಮೂಹಿಕ ವಿವಾಹಗಳಿಂದ ಅದ್ದೂರಿಯ ವಿವಾಹಗಳಿಗೆ ಕಡಿವಾಣ ಹಾಕಲಾಗಿದ್ದು, ನವ ದಂಪತಿಯರು ಜೀವನದಲ್ಲಿ ಪರಸ್ಪರ ಅರ್ಥ ಮಾಡಿಕೊಂಡು ಸುಖ ಜೀವನ ನಡೆಸಬೇಕು. ಬಡವ ಬಲ್ಲಿದರೆನ್ನದೇ ಇಂತಹ ಮದುವೆಗಳಲ್ಲಿ ಎಲ್ಲಾ ವರ್ಗದ ಜನರೂ ಭಾಗವಹಿಸಬೇಕು ಎಂದರು.
ಸ್ವಾಮೀಜಿ ವಧೂ-ವರರಿಗೆ ಮಾಂಗಲ್ಯ, ಬಟ್ಟೆ ಮತ್ತು ಮಂಗಳ ದ್ರವ್ಯಗಳನ್ನು ನೀಡಿ ಗೌರವಿಸಿದರು. ಸಮಾರಂಭದಲ್ಲಿನಾಡಿನ ವಿವಿಧ ಕಡೆಗಳಿಂದ ಬಂದಿದ್ದ ಹತ್ತು ಸಾವಿರಕ್ಕೂ ಹೆಚ್ಚು ಭಕ್ತರು ಭಾಗವಹಿಸಿದ್ದರು.
ಪ್ರತಿಭಾ ಕಾರಂಜಿ
ದಾವಣಗೆರೆ: ಚನ್ನಗಿರಿ ತಾಲ್ಲೂಕು ಯಲ್ಲೋದಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಈಚೆಗೆ ಬಸವಾಪಟ್ಟಣ ವಲಯಮಟ್ಟದ ಪ್ರೌಢಶಾಲೆಗಳ ಪ್ರತಿಭಾ ಕಾರಂಜಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಇದೇ ಸಂದರ್ಭದಲ್ಲಿ ವಿವಿಧ ಸ್ಪರ್ಧೆ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಗೌರವಿಸಲಾಯಿತು.
ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಪಾರಿಬಾಯಿ ಅಧ್ಯಕ್ಷತೆ ವಹಿಸಿದ್ದರು. ತಾಲ್ಲೂಕು ಪಂಚಾಯ್ತಿ ಸದಸ್ಯೆ ಪಾರ್ವತಿಬಾಯಿ, ಗ್ರಾ.ಪಂ. ಉಪಾಧ್ಯಕ್ಷ ಹನುಮಂತಪ್ಪ, ಆರ್.ಎಚ್. ಕೊಟಗಿಮನಿ, ಬಸವನಗೌಡ, ಕೆಂಪನಹಳ್ಳಿ ಬಸವರಾಜಪ್ಪ, ಟಿ.ಕೆ. ರುದ್ರಪ್ಪ, ಕೆ.ಎಚ್. ಮಂಜಪ್ಪ, ರಂಗನಾಯ್ಕ, ಹಾಲೇಶನಾಯ್ಕ, ಇತರರು ಇದ್ದರು.