ಕುಕನೂರು: ಇಲ್ಲಿಯ ಮಾದಿಗ ಸಮಾಜ ಬಾಂಧವರಿಗೆ ಆರಾಧ್ಯ ದೇವತೆ ಎನಿಸಿರುವ ಗಾಳೆಮ್ಮದೇವಿ ಜಾತ್ರಾ ಮಹೋತ್ಸವ ಮಂಗಳವಾರ ಸಡಗರ-ಸಂಭ್ರಮ ಹಾಗೂ ಭಕ್ತಿಯಿಂದ ನೆರವೇರಿತು.
ಬೆಳಿಗ್ಗೆ ನೂರಾರು ಭಕ್ತರು ಭಕ್ತಿಯಿಂದ ಗಂಗಾಮಾತೆಗೆ ವಿಶೇಷ ಪೂಜೆ ಸಲ್ಲಿಸಿದ ನಂತರದಲ್ಲಿ ಪ್ರತಿ ಮೂರು ವರ್ಷಕ್ಕೊಮ್ಮೆ ಆಚರಿಸುವಂತೆ ಗಾಳೆಮ್ಮದೇವಿಯ ವೈಭವದ ಪಲ್ಲಕ್ಕಿ ಉತ್ಸವಕ್ಕೆ ಚಾಲನೆ ನೀಡಲಾಯಿತು.
ಕೋಳಿಪೇಟೆ, ಕಿಲ್ಲೇದ ಓಣಿ, ಹಳೆಯ ಬಜಾರ, ತೇರಿನಗಡ್ಡಿ, ಶಿರೂರ ವೀರಭದ್ರಪ್ಪ ವೃತ್ತ, ಬಸ್ ನಿಲ್ದಾಣ ಹಾಗೂ ಅಂಬೇಡ್ಕರ್ ವೃತ್ತದ ವರೆಗಿನ ಪ್ರಮುಖ ಬೀದಿಯ ಮೂಲಕವಾಗಿ ದೇವಿಯ ಪಲ್ಲಕ್ಕಿ ಉತ್ಸವವನ್ನು ನೆರವೇರಿಸಲಾಯಿತು. ಮುತೈದೆಯರ ಕಳಶದಾರತಿ, ಜೋಗತಿಯರ ಚಾಮರ, ಡೊಳ್ಳು, ಭಜನೆ, ಬ್ಯಾಂಡ್ ಹಾಗೂ ಜಾಂಜ್ ಮೇಳ ಸೇರಿದಂತೆ ಮಂಗಲವಾದ್ಯ ಮೇಳಗಳು ಪಲ್ಲಕ್ಕಿ ಉತ್ಸವಕ್ಕೆ ಕಳೆ ನೀಡಿದ್ದವು.
ಪಲ್ಲಕ್ಕಿ ಸಾಗುವ ಎಲ್ಲ ಪ್ರಮುಖ ರಸ್ತೆಯನ್ನು ಸ್ವಚ್ಛಗೊಳಿಸಿ ನೀರಿನಿಂದ ಮಡಿಗೊಳಿಸಿ ತೆಂಗಿನಗರಿ ಹಾಗೂ ತಳಿರುರೋರಣಗಳಿಂದ ಶೃಂಗರಿಸಲಾಗಿತ್ತು.ಸಮಾಜ ಮುಖಂಡ ಈರಣ್ಣ ಭಂಡಾರಿ, ಗ್ರಾಮ ಪಂಚಾಯತಿ ಸದಸ್ಯರಾದ ನಿಂಗಪ್ಪ ಗೊರ್ಲೆಕೊಪ್ಪ, ರಮೇಶ ಶಾಸ್ತ್ರಿ, ಪರಶುರಾಮ ಸಕ್ರಣ್ಣವರ, ಸಿದ್ದಪ್ಪ ಭಂಡಾರಿ, ಅಂದಪ್ಪ ಭಂಡಾರಿ, ಚಂದ್ರಪ್ಪ ಆರಬೆರಳಿನ, ಯಮನೂರಪ್ಪ ಗೊರ್ಲೆಕೊಪ್ಪ, ನೀಲಪ್ಪ ಪೂಜಾರ, ರುದ್ರಪ್ಪ ಭಂಡಾರಿ, ದೇವಪ್ಪ ಗುಳದಳ್ಳಿ, ಶಿವಪ್ಪ ಭಂಡಾರಿ ಮತ್ತಿತರರು ನೇತೃತ್ವ ವಹಿಸಿದ್ದರು.ಸಮಾಜದ ವಿವಿಧ ಯುವಕರು ಹಾಗೂ ಯುವಕ ಮಂಡಳ ಪದಾಧಿಕಾರಿ ಉತ್ಸವದ ಯಶಸ್ವಿಗಾಗಿ ಶ್ರಮಿಸಿದರು.