ಯಳಂದೂರು: `ಶಾಲಾ ವಿದ್ಯಾರ್ಥಿಗಳಿಗೆ ಸರ್ಕಾರದ ವತಿಯಿಂದ ಉಚಿತವಾಗಿ ನೀಡುವ ಸೈಕಲ್ಗಳನ್ನು ವೈಯುಕ್ತಿಕ ಕೆಲಸಕ್ಕೆ ಬಳಸಬಾರದು. ಶಿಕ್ಷಣದ ಉದ್ದೇಶಕ್ಕಾಗಿಯೇ ಇದರ ಬಳಕೆ ಆಗಬೇಕು~ ಎಂದು ತಾಲ್ಲೂಕು ಪಂಚಾಯಿತಿ ಸದಸ್ಯ ಡಿ. ವೆಂಕಟಾಚಲ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ತಾಲ್ಲೂಕಿನ ಬನ್ನಿಸಾರಿಗೆ ಗ್ರಾಮದ ಉನ್ನತೀಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಬುಧವಾರ ಹಮ್ಮಿಕೊಂಡಿದ್ದ ಸೈಕಲ್ ವಿತರಣಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.
ಗ್ರಾಮಾಂತರ ಪ್ರದೇಶದ ಕೆಲವು ಶಾಲೆಗಳಲ್ಲಿ ವಿದ್ಯಾರ್ಥಿಗಳು, ಅದರಲ್ಲೂ ಹೆಣ್ಣು ಮಕ್ಕಳು ಕೇವಲ ಸೈಕಲ್ ನೀಡುವ ಸಮಯದಲ್ಲಿ ಮಾತ್ರ ಶಾಲೆಗೆ ಹಾಜರಾಗುತ್ತಾರೆ. ಹಾಗಾಗಿ ಇವರ ವ್ಯಾಸಂಗ ಅರ್ಧಕ್ಕೆ ಕುಂಠಿತಗೊಳ್ಳುತ್ತದೆ. ಈ ಕಾರ್ಯಕ್ರಮ ಆಯೋಜಿಸಿದ್ದರಿಂದ ವಿದ್ಯಾರ್ಥಿಗಳನ್ನು ಶಾಲೆಗೆ ಆಕರ್ಷಿಸಲು ಸಹಕಾರಿಯಾಗುತ್ತದೆ ಎಂದರು.
ಗ್ರಾಮ ಪಂಚಾಯಿತಿ ಸದಸ್ಯ ಕೃಷ್ಣಮೂರ್ತಿ, ಎಸ್ಡಿಎಂಸಿ ಅಧ್ಯಕ್ಷ ಬಸವರಾಜು, ಸದಸ್ಯ ಆರ್. ರಾಜು, ಮುಖ್ಯ ಶಿಕ್ಷಕಿ ನಿರ್ಮಲಕುಮಾರಿ. ಸಹ ಶಿಕ್ಷಕರಾದ ಸಿ..ವಿ. ಲತಾ, ಎಂ ರೇಖಾ, ಎಂ. ಮಂಗಳಾ ಪೋಷಕರು, ವಿದ್ಯಾರ್ಥಿಗಳು ಹಾಜರಿದ್ದರು.