ಹೈದರಾಬಾದ್: ಪಾಲೆಂ ಬಳಿ ಸಂಭವಿಸಿದ ವೊಲ್ವೊ ಬಸ್ ದುರಂತ ಪ್ರಕರಣದ ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಿರುವ ಆಂಧ್ರ ಸಿಐಡಿ ಪೊಲೀಸರು, ಪ್ರಕರಣದ ಬಗ್ಗೆ ಹಲವು ಆಯಾಮಗಳಲ್ಲಿ ತನಿಖೆ ಕೈಗೊಂಡಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ವೊಲ್ವೊ ಬಸ್ ತಯಾರಕರು, ಹಂಚಿಕೆದಾರರು, ಬಸ್ ಮಾಲೀಕರು, ಬಸ್ ಓಡಿಸುತ್ತಿದ್ದ ಜಬ್ಬಾರ್ ಟ್ರಾವೆಲ್ಸ್, ಪರವಾನಗಿ ನೀಡಿರುವ ಬೆಂಗಳೂರು, ಹೈದರಾಬಾದ್ನ ಆರ್ಟಿಎ ಅಧಿಕಾರಿಗಳು, ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳು ಮತ್ತು ರಸ್ತೆ ನಿರ್ಮಿಸಿದ ಗುತ್ತಿಗೆದಾರರ ವಿರುದ್ಧ ಅಪರಾಧ ಪ್ರಕರಣ ದಾಖಲಿಸಿಕೊಳ್ಳಲು ಯೋಚಿಸುತ್ತಿದೆ.
‘ಜಬ್ಬಾರ್ ಟ್ರಾವೆಲ್ಸ್ನ ಸೈಯದ್ ಅಕ್ರಂ ಅಹಮ್ಮದ್, ಶಬ್ಬೀರ್ ಖಾನ್, ಅಮಾನುಲ್ಲಾ ಖಾನ್, ಮೊಹಮ್ಮದ್ ರಫೀಕ್ ಅವರನ್ನು ಬೆಂಗಳೂರಿನಲ್ಲಿ ಬಂಧಿಸಲಾಗಿದ್ದು, ಸೀಟು ಕಾಯ್ದಿರಿಸುವಿಕೆ, ಪ್ರಯಾಣಿಕರ ಪಟ್ಟಿ ಸಿದ್ಧತೆ ಮತ್ತು ದೂರ ಪ್ರಯಾಣದ ಬಸ್ಗಳಲ್ಲಿ ಲಗೇ-ಜ್ಗೆ ಸಂಬಂಧಿಸಿದ ನಿಯಮದ ಕುರಿತು ಪ್ರಶ್ನಿಸಲಾಗಿದೆ’ ಎಂದು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಟಿ. ಕೃಷ್ಣಪ್ರಸಾದ್ ತಿಳಿಸಿದ್ದಾರೆ.
ಜಬ್ಬಾರ್ ಟ್ರಾವೆಲ್ಸ್ ಮತ್ತು ದಿವಾಕರ್ ರೋಡ್ಲೈನ್ಸ್ ಮಧ್ಯದ ಒಪ್ಪಂದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲಿಸುತ್ತಿರುವ ಪೊಲೀಸರು, ದುರಂತದ ಬಳಿಕ ತನಿಖೆಯಿಂದ ತಪ್ಪಿಸಿಕೊಳ್ಳಲು ಹುನ್ನಾರ ನಡೆಸಿರಬಹುದೇ ಎಂಬುದನ್ನೂ ತಿಳಿಯಲು ಪ್ರಯತ್ನಿಸುತ್ತಿದ್ದಾರೆ.
ಜಬ್ಬಾರ್ ಟ್ರಾವೆಲ್ಸ್ಗೆ ಸೇರಿದ ಎಪಿ 02 –ಟಿಎ0963 ಸಂಖ್ಯೆಯ ವೊಲ್ವೊ ಬಸ್ ಆಂಧ್ರದ ಪಾಲೆಂ ಬಳಿ ಕಿರುಸೇತುವೆಗೆ ತಡೆಗೋಡೆಗೆ ಡಿಕ್ಕಿ ಹೊಡೆದ ಪರಿಣಾಮ ಬೆಂಕಿ ಹೊತ್ತಿಕೊಂಡು ಉರಿದಿತ್ತು. ಅಕ್ಟೋಬರ್ 30ರಂದು ಜರುಗಿದ್ದ ಈ ಘಟನೆಯಲ್ಲಿ ಮಗು ಸೇರಿದಂತೆ 45 ಮಂದಿ ಸಾವನ್ನಪ್ಪಿದ್ದರು.
ಬಳಿಕ ಘಟನೆಯ ತನಿಖೆಯನ್ನು ಸಿಐಡಿಗೆ ವಹಿಸಲಾಗಿತ್ತು. ತನಿಖೆಯ ಭಾಗವಾಗಿ ಸಿಐಡಿ ಅಧಿಕಾರಿಗಳು ಈಚೆಗೆ ಬೆಂಗಳೂರಿನಲ್ಲಿ ಜಬ್ಬಾರ್ ಟ್ರಾವೆಲ್ಸ್ನ ನಾಲ್ವರು ಉದ್ಯೋಗಿಗಳನ್ನು ವಶಕ್ಕೆ ತೆಗೆದುಕೊಂಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.