ನವದೆಹಲಿ (ಪಿಟಿಐ): ಯುಪಿಎ ಸರ್ಕಾರ 2008ರಲ್ಲಿ ವಿಶ್ವಾಸಮತ ಯಾಚಿಸಿದ ವೇಳೆ ನಡೆದ `ವೋಟಿಗಾಗಿ ನೋಟು~ ಹಗರಣದಲ್ಲಿ ಸಮಾಜವಾದಿ ಪಕ್ಷದ ಮುಖಂಡರಾದ ರೇವತಿ ರಮಣ್ ಸಿಂಗ್ ಭಾಗಿಯಾಗಿದ್ದಾರೆ ಎನ್ನುವುದಕ್ಕೆ ಪುರಾವೆ ಇಲ್ಲ ಎಂದು ದೆಹಲಿ ಪೊಲೀಸರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ಲಭ್ಯ ದಾಖಲೆ ಆಧಾರದಲ್ಲಿ ಸಿಂಗ್ ಇದರಲ್ಲಿ ಭಾಗಿಯಾಗಿದ್ದಾರೆ ಎಂದು ಹೇಳಲು ಸಾಧ್ಯವಿಲ್ಲ. ಆರೋಪ ಪಟ್ಟಿಯಲ್ಲಿ ಸಿಂಗ್ ಅವರನ್ನು ಹೆಸರಿಸುವುದಕ್ಕೆ ಅವರ ವಿರುದ್ಧ ಯಾವುದೇ ಪುರಾವೆ ಇಲ್ಲ ಎಂದು ಪಬ್ಲಿಕ್ ಪ್ರಾಸಿಕ್ಯೂಟರ್ ರಾಜೀವ್ ಮೋಹನ್, ವಿಶೇಷ ನ್ಯಾಯಾಧೀಶೆ ಸಂಗೀತಾ ಧಿಂಗ್ರಾ ಸೆಹ್ಗಲ್ ಅವರಿಗೆ ತಿಳಿಸಿದರು.
ವಿಶ್ವಾಸಮತ ಯಾಚನೆ ವೇಳೆ ರೇವತಿ ಬಿಜೆಪಿ ಸಂಸದರನ್ನು ಭೇಟಿಯಾಗಿದ್ದರು ಎಂದು ಪ್ರತಿವಾದಿ ವಕೀಲರು ಮಾಡಿದ ಆರೋಪಕ್ಕೆ ಪ್ರತಿಕ್ರಿಯಿಸಿದ ಮೋಹನ್, `ಬಿಜೆಪಿ ಸಂಸದರ ಜತೆ ಭೇಟಿಗೆ ನಿರ್ಬಂಧ ಇರಲಿಲ್ಲ~ ಎಂದರು.
ದೆಹಲಿ ಪೊಲೀಸ್ ಅಪರಾಧ ವಿಭಾಗದವರು ಸಿಂಗ್ ಅವರನ್ನು ಪ್ರಶ್ನೆಗೊಳಪಡಿಸಿದ್ದಾರೆ.
ಅಲ್ಲದೆ ಬಿಜೆಪಿಯ ಇಬ್ಬರು ಸಂಸದರು ಸೇರಿದಂತೆ ಇತರ ಆರೋಪಿಗಳ ಹೇಳಿಕೆಯನ್ನು ದಾಖಲಿಸಲಾಗಿದೆ. ಎಲ್ಲಿಯೂ ಸಿಂಗ್ ಪಾತ್ರ ಇದೆ ಎನ್ನುವುದಕ್ಕೆ ಪುರಾವೆ ಸಿಗಲಿಲ್ಲ. ಹಾಗಾಗಿ ಆರೋಪ ಪಟ್ಟಿಯಲ್ಲಿ ಅವರನ್ನು ಹೆಸರಿಸಲಿಲ್ಲ ಎಂದು ಮೋಹನ್ ಹೇಳಿದರು.
ಈ ನಡುವೆ ಕೋರ್ಟ್, ಅಡ್ವಾಣಿ ಅವರ ಮಾಜಿ ಸಹಾಯಕ ಸುಧೀಂದ್ರ ಕುಲಕರ್ಣಿ, ಬಿಜೆಪಿ ಸಂಸದರಾದ ಫಗನ್ ಸಿಂಗ್ ಕುಲಸ್ತೆ ಮತ್ತು ಮಹಾವೀರ್ ಸಿಂಗ್ ಭಗೋರಾ ಅವರ ಜಾಮೀನು ಅರ್ಜಿ ವಿಚಾರಣೆಯ ಆದೇಶವನ್ನು ಇದೇ 21ಕ್ಕೆ ಕಾಯ್ದಿರಿಸಿತು.
ಸಮನ್ಸ್: ಪ್ರಕರಣದಲ್ಲಿ ಆರೋಪ ಎದುರಿಸುತ್ತಿರುವ ಬಿಜೆಪಿ ಸಂಸದ ಎಂ.ಪಿ.ಅಶೋಕ್ ಅಗರ್ವಾಲ್ ಅವರಿಗೆ ನ.3ರಂದು ತನ್ನ ಮುಂದೆ ಹಾಜರಾಗುವಂತೆ ದೆಹಲಿ ಕೋರ್ಟ್ ಸಮನ್ಸ್ ನೀಡಿದೆ. ಪೊಲೀಸರು ಅಗರ್ವಾಲ್ ವಿರುದ್ಧ ಆರೋಪ ಹೊರಿಸಿದ್ದರು.