ಹೊಸಕೋಟೆ: ಪಟ್ಟಣದ ಕೃಷ್ಣರಾಜೇಂದ್ರ ರಸ್ತೆಯ ಮೈಸೂರು ಬ್ಯಾಂಕ್ ಕಟ್ಟಡದ ಮಹಡಿ ಮೇಲಿನ ಕೊಠಡಿಯೊಂದರಲ್ಲಿ ವಾಸವಾಗಿದ್ದ ಕಿರಣ್ ಸಿಂಗ್ (28) ಎಂಬಾತ ಶನಿವಾರ ಬೆಳಿಗ್ಗೆ ಬಚ್ಚಲ ಮನೆಯಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದಾನೆ.
ಆತ ಒಂಟಿಯಾಗಿ ವಾಸಿಸುತ್ತಿದ್ದ. ಪೈಪ್ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಆತ ಕೆಲ ತಿಂಗಳ ಹಿಂದೆ ಕೆಲಸ ಬಿಟ್ಟಿದ್ದ. ಈತನ ಸಾವಿನ ಬಗ್ಗೆ ಶಂಕೆ ವ್ಯಕ್ತಪಡಿಸಿ, ಮೃತನ ಮಾವ ಶಂಕರ್ ಸಿಂಗ್ ಎಂಬುವವರು ಪೊಲೀಸರಿಗೆ ದೂರು ನೀಡಿದ್ದಾರೆ.
ಸರ ಅಪಹರಣ: ಪಟ್ಟಣದ ವಿಶ್ವೇಶ್ವರಯ್ಯ ಬಡಾವಣೆಯ 5ನೇ ಅಡ್ಡ ರಸ್ತೆಯಲ್ಲಿ ವಾಸವಾಗಿದ್ದ ಜ್ಯೋತಿ ಎಂಬವರ ಮಾಂಗಲ್ಯ ಸರವನ್ನು ಬೈಕ್ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಅಪಹರಿಸಿದ ಘಟನೆ ಶುಕ್ರವಾರ ಮಧ್ಯಾಹ್ನ ನಡೆದಿದೆ.
ದೇವಸ್ಥಾನಕ್ಕೆ ಹೋಗಿದ್ದ ಜ್ಯೋತಿ ಇಬ್ಬರು ಸ್ನೇಹಿತರ ಜೊತೆಗೆ ಮನೆಗೆ ನಡೆದು ಬರುತ್ತಿದ್ದಾಗ ಬೈಕ್ನಲ್ಲಿ ಬಂದ ಸವಾರ ಆಕೆಯ ಹೊಟ್ಟೆಗೆ ಬಲವಾಗಿ ಗುದ್ದಿದ. ಆಕೆ ಕೆಳಕ್ಕೆ ಬಗ್ಗುತ್ತಿದ್ದಂತೆ ಹಿಂಬದಿ ಸವಾರ ಸರ ಅಪಹರಿಸಿ ಪರಾರಿಯಾದ. ಸರದ ಬೆಲೆ ರೂ 65 ಸಾವಿರ ಎಂದು ದೂರಿನಲ್ಲಿ ತಿಳಿಸಲಾಗಿದೆ.