ದಾವಣಗೆರೆ: ಸಾಹಸ ಕ್ರೀಡೆಗಳು ಆಂತರಿಕ ವ್ಯಕ್ತಿತ್ವ ವೃದ್ಧಿಗೆ ಪೂರಕ ಎಂದು ಎನ್ಸಿಸಿ 33 ಬೆಟಾಲಿಯನ್ನ ಲೆಫ್ಟಿನೆಂಟ್ ಕರ್ನಲ್ ಬೆನ್ನಿ ಸಬಾಸ್ಟಿನ್ ಅಭಿಪ್ರಾಯಪಟ್ಟರು.
ಸಮೀಪದ ಕೊಂಡಜ್ಜಿಯಲ್ಲಿ ಭಾನುವಾರ ಭಾರತ್ ಸ್ಕೌಟ್ ಮತ್ತು ಗೈಡ್ಸ್ ಸಂಸ್ಥೆ ವತಿಯಿಂದ ನಡೆದ ರಾಜ್ಯಮಟ್ಟದ ಮುಕ್ತದಳಗಳ ಮೇಳದ ಅಂಗವಾಗಿ ಎಂ.ಕೆ. ಪಾಣಿ ಸಾಹಸಮಯ ಚಟುವಟಿಕೆ ಕೇಂದ್ರ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿರುವ ವಿದ್ಯಾರ್ಥಿಗಳಿಗೆ ಇದೊಂದು ಸುವರ್ಣ ಅವಕಾಶ. ಸಾಹಸಮಯ ಚಟುವಟಿಕೆ ಕೇಂದ್ರ ಆರಂಭಿಸುವ ಮೂಲಕ ಸಂಸ್ಥೆ ಶ್ಲಾಘನೀಯ ಕಾರ್ಯ ಮಾಡಿದೆ ಎಂದರು.
ಭಾರತ್ ಸ್ಕೌಟ್ ಮತ್ತು ಗೈಡ್ಸ್ನ ರಾಜ್ಯ ಮುಖ್ಯ ಆಯುಕ್ತ ಕೊಂಡಜ್ಜಿ ಬ. ಷಣ್ಮುಖಪ್ಪ ಮಾತನಾಡಿ, ಎಂ.ಕೆ. ಪಾಣಿ ಅವರ ಹೆಸರಿನಲ್ಲಿ ಕೇಂದ್ರ ಆರಂಭಿಸುತ್ತಿರುವುದು ಅವರಿಗೆ ಸಲ್ಲಿಸುತ್ತಿರುವ ಗೌರವ. ಪಾಣಿ ಅವರು ಸ್ಕೌಟ್ ಸಂಸ್ಥೆಯ ಜಿಲ್ಲಾ ಆಯುಕ್ತರಾಗಿ ಸೇವೆ ಸಲ್ಲಿಸಿದ್ದಾರೆ ಎಂದು ಸ್ಮರಿಸಿದರು.
ಬಿ.ಕೆ. ಪಾಟೀಲ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯ್ತಿ ಸದಸ್ಯ ವೀರೇಶ್ ಹನಗವಾಡಿ, ಸ್ಕೌಟ್ ಸಂಸ್ಥೆಯ ಪದಾಧಿಕಾರಿಗಳಾದ ಮಹಮದ್ ವಾಸಿಲ್, ಸಿದ್ದೇಶ್, ಮುರುಘರಾಜೇಂದ್ರ ಚಿಗಟೇರಿ, ಹುಬ್ಬಳ್ಳಿಯ ಬಿ.ಕೆ. ಪಾಟೀಲ್, ಉಡುಪಿಯ ಆನಂದ ಅಡಿಗ, ಜಾನಕಿ ವೇಣುಗೋಪಾಲ್, ಶಾಂತಾ ಯಾವಗಲ್, ಪುಟ್ಟಮ್ಮ, ಟಿ.ಪಿ. ಭಿಮಪ್ಪ, ಷಡಾಕ್ಷರಪ್ಪ, ವಾರ್ಡನ್ ಮಂಜಪ್ಪ ಇತರರು ಇದ್ದರು.