ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವ್ಯವಸ್ಥಿತ ತರಬೇತಿ ಇಲ್ಲದಿರುವುದು ಸಮಸ್ಯೆ: ಹೈಜಂಪ್ ಸ್ಪರ್ಧಿ ಸಹನಾ ಕುಮಾರಿ

Last Updated 8 ಜುಲೈ 2012, 19:30 IST
ಅಕ್ಷರ ಗಾತ್ರ

ಮಂಗಳೂರು: `ಹೊರರಾಷ್ಟ್ರಗಳಲ್ಲಿ ಪ್ರಮುಖ ಕ್ರೀಡಾಕೂಟಗಳಲ್ಲಿ ಭಾಗವಹಿಸುವ ಅಥ್ಲೀಟುಗಳಿಗೆ ದೀರ್ಘಾವಧಿ ಸಿದ್ಧತಾ ಯೋಜನೆ ಇರುತ್ತದೆ. ನಮ್ಮಲ್ಲಿ ಅಂಥ ವ್ಯವಸ್ಥಿತ ಪೂರ್ವಸಿದ್ಧತಾ ಯೋಜನೆ ಇಲ್ಲ. ಕೆಲವೊಮ್ಮೆ  ಮಹತ್ವದ ಶಿಬಿರಗಳೂ ರದ್ದಾಗುವುದೂ ಇದೆ~ ಎನ್ನುತ್ತಾರೆ ಲಂಡನ್ ಒಲಿಂಪಿಕ್ಸ್‌ನ ಹೈಜಂಪ್ ಸ್ಪರ್ಧೆಗೆ ಅರ್ಹತೆ ಗಿಟ್ಟಿಸಿರುವ ಸಹನಾ ಕುಮಾರಿ.

ಖ್ಯಾತ ಅಥ್ಲೀಟ್ ಆಗಿರುವ ಪತಿ ಬಿ.ಜಿ.ನಾಗರಾಜ್, ಏಳು ವರ್ಷದ ಮಗಳು ಪಾವನಾ ಜತೆ, ಹುಟ್ಟೂರಿನ (ಮಂಗಳೂರಿನಿಂದ 14 ಕಿ.ಮೀ. ದೂರದ) ಸೋಮೇಶ್ವರದ ದೇವಾಲಯಕ್ಕೆ ಭಾನುವಾರ ಭೇಟಿ ನೀಡಲು ಅವರು ನಗರಕ್ಕೆ ಬಂದಿದ್ದರು. ಈ ಸಂದರ್ಭದಲ್ಲಿ ಪತ್ರಕರ್ತರ ಜತೆ ಖುಷಿ- ಎದುರಿಸಿದ ಒತ್ತಡ ಎರಡನ್ನೂ ಹಂಚಿಕೊಂಡರು.

`ರಷ್ಯದ ಕೋಚ್ ಎವ್ಗೆನಿ ನಿಕಿತಿನ್ ಅವರು ನನ್ನ ಮೇಲೆ ವಿಶ್ವಾಸವಿರಿಸಿ ಯೋಜನೆ ರೂಪಿಸಿದ್ದರು. ಖಂಡಿತಕ್ಕೂ ನಾನು ಒಲಿಂಪಿಕ್ಸ್ ಅರ್ಹತಾ ಮಟ್ಟ ದಾಟಬಲ್ಲೆ ಎಂಬ ವಿಶ್ವಾಸ ಅವರಲ್ಲಿತ್ತು. ಥಾಯ್ಲೆಂಡ್‌ನಲ್ಲಿ ಸ್ವಲ್ಪದರಲ್ಲೇ ಅರ್ಹತಾ ಮಟ್ಟ (1.91 ಮೀ.) ಜಿಗಿಯಲು ಸಾಧ್ಯವಾಗಲಿಲ್ಲ. ಹೈದರಾಬಾದಿನ ಕೂಟದಲ್ಲೂ ಒತ್ತಡವಿತ್ತು. ರಾತ್ರಿ 7.30 ಗಂಟೆಗೆ ಆರಂಭವಾಗಬೇಕಿದ್ದ ಸ್ಪರ್ಧೆ 10.30ರವರೆಗೆ ನಡೆಯಿತು. ಮೊದಲ ಯತ್ನದಲ್ಲೇ ದಾಖಲೆ ಎತ್ತರಕ್ಕೆ ಜಿಗಿದ ಕಾರಣ ನಿರಾಳವಾದೆ~ ಎಂದು ನೈರುತ್ಯ ರೈಲ್ವೆಯ ಸಹನಾ ನೆನಪಿಸಿಕೊಂಡರು.

ಏನೂ ಕೊಡಲಿಲ್ಲ: `ರಾಜ್ಯ ಸರ್ಕಾರ ನನ್ನನ್ನು ಗುರುತಿಸಲಿಲ್ಲ. ಶಾಲಾ     ದಿನಗಳಿಂದಲೇ ಉತ್ತಮ ಸಾಧನೆ ತೋರಿದ್ದೇನೆ. ಸಾಕಷ್ಟು ಹಿಂದೆಯೇ (2000) ರಾಷ್ಟ್ರೀಯ  ಜೂನಿಯರ್ ದಾಖಲೆ ಮಾಡಿದ್ದೆ. ದಸರಾ, ಏಕಲವ್ಯ ಪ್ರಶಸ್ತಿ ಕೂಡ ಬರಲಿಲ್ಲ.  ಈ ಬೇಸರದಿಂದಲೇ  ನಾವು (2006-09) ಜಾರ್ಖಂಡ್ ರಾಜ್ಯ ಪ್ರತಿನಿಧಿಸಿದ್ದೆವು. ಅಲ್ಲಿ ಸೌಲಭ್ಯಗಳ ಜತೆಗೆ ಭರವಸೆ ನೀಡಿದಂತೆ ನಗದು ಬಹುಮಾನ ನೀಡಿದ್ದರು~ ಎಂದು ಅವರು ಹೇಳಿದರು.

ಗೋಕರ್ಣನಾಥೇಶ್ವರ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಪುರುಷೋತ್ತಮ ಪೂಜಾರಿ ಉಪಸ್ಥಿತರಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT