ಇಂಡಿ: ವ್ಯಾಪಾರ ಮುಗಿಸಿಕೊಂಡು ರಾತ್ರಿ ಮನೆಗೆ ಹೊರಟಿದ್ದ ಬಂಗಾರದ ವ್ಯಾಪಾರಿಯೊಬ್ಬರ ಕಾರನ್ನು ಅಡ್ಡಗಟ್ಟಿ ಹಲ್ಲೆ ನಡೆಸಿ, ಬಂಗಾರದ ಚೀಲ ಅಪಹರಿಸಿಕೊಂಡು ಪರಾರಿಯಾದ ಘಟನೆ ಬುಧವಾರ ನಡೆದಿದೆ.
ಸೋಮು ಬಿರಾದಾರ ಅವರ ಕಾರನ್ನು ತಡೆದ ನಾಲ್ವರು ದುಷ್ಕರ್ಮಿಗಳು ಗುಂಡು ಹಾರಿಸಿ, ಕಣ್ಣಲ್ಲಿ ಖಾರದ ಪುಡಿ ಎರಚಿ, ಹಲ್ಲೆ ನಡೆಸಿ ಬಂಗಾರದ ಚೀಲದೊಡನೆ ನಾಪತ್ತೆಯಾಗಿದ್ದಾರೆ.
ಕಾರಿನ ನಂಬರ್ ಗುರುತಿಸಲಾಗಿದ್ದು, ಕಳೆದ ಜೂನ್ ತಿಂಗಳ ತಾ.5ರಂದು ಇದೇ ತಂಡ ನನ್ನ ಕಾರನ್ನು ಅಡ್ಡಗಟ್ಟಿ, ಹಲ್ಲೆ ನಡೆಸಿ ಬಂಗಾರದ ಚೀಲ ಅಪಹರಿಸಲು ನಡೆಸಿದ ಯತ್ನ ವಿಫಲವಾಗಿತ್ತು. ಈ ಸಲ ಗುಂಡು ಹಾರಿಸಿ, ಹೆದರಿಸಿ ಬಂಗಾರ ದೋಚಿದ್ದಾರೆ ಎಂದು ಬಿರಾದಾರ ತಿಳಿಸಿದ್ದಾರೆ.
ದೋಚಿದ ಬಂಗಾರದ ಮೊತ್ತ ಎಷ್ಟೆಂದು ಗೊತ್ತಾಗಿಲ್ಲ. ಸೋಮು ಬಿರಾದಾರ ಅವರ ಮುಂಗೈ ಮತ್ತು ಕುತ್ತಿಗೆಗೆ ಗಾಯಗಳಾಗಿದ್ದು, ಕಾರ್ ಚಾಲಕನಿಗೂ ಸಣ್ಣಪುಟ್ಟ ಗಾಯಗಳಾಗಿವೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.