ದೇವದುರ್ಗ: ಬೆಳಗಾದರೆ ಸಾಕು ಗ್ರಾಹಕರನ್ನು ಮೋಸ ಮಾಡಲು ಹೊಂಚು ಹಾಕುತ್ತಿರುವ ಕೆಲವು ವ್ಯಾಪಾರಸ್ಥರಿಂದ ದೂರ ಇರಬೇಕಾದರೆ ಮೊದಲು ಗ್ರಾಹಕರೇ ಜಾಣಗಬೇಕು ಎಂದು ನೂತನ ಜಿಲ್ಲಾ ಪಂಚಾಯಿತಿ ಸದಸ್ಯೆ ಹರ್ಷ ಜಗನಾಥರಾಯ್ ಪಾಟೀಲ್ ಅಭಿಪ್ರಾಯಪಟ್ಟರು.
ಗುರುವಾರ ತಾಲ್ಲೂಕಿನ ನವಿಲಗುಡ್ಡ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಣ ಇಲಾಖೆ ವತಿಯಿಂದ ಏರ್ಪಡಿಸಲಾಗಿದ್ದ ಗ್ರಾಹಕರ ಕ್ಲಬ್-2011 ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಗ್ರಾಹಕರು ಒಂದಿಲ್ಲ ಒಂದು ಕಡೆ ಮೋಸ ಹೋಗುತ್ತಿರುವುದು ಸಾಮಾನ್ಯವಾಗಿದೆ. ದೊಡ್ಡ ಪಟ್ಟಣಗಳಲ್ಲಿ ಇದರ ಪ್ರಭಾವ ಹೆಚ್ಚಾಗಿ ಕಂಡು ಬಂದಿರುವುದರಿಂದ ಗ್ರಾಹಕರು ಎಚ್ಚರಗೊಳ್ಳಬೇಕಾದ ಅನಿವಾರ್ಯತೆ ಇದೆ ಎಂದರು.
ಶಿಕ್ಷಣ ಸಂಯೋಜಕ ಸತ್ಯಪ್ಪ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ತಾಲ್ಲೂಕಿನಲ್ಲಿ ಸರ್ಕಾರಿ ಬಾಲಕರ ಪ್ರೌಢ ಶಾಲೆ ಜಾಲಹಳ್ಳಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನವಿಲಗುಡ್ಡ, ಕನ್ಯಾ ಹಿರಿಯ ಪ್ರಾಥಮುಕ ಶಾಲೆ ದೇವದುರ್ಗ ಪಟ್ಟಣ ಮತ್ತು ಸರ್ಕಾರಿ ಪ್ರೌಢ ಶಾಲೆ ಹಿರೇಬುದೂರು ಒಟ್ಟು ನಾಲ್ಕು ಶಾಲೆಗಳನ್ನು ಸದ್ರಿ ಯೋಜನೆ ಅಡಿಯಲ್ಲಿ ಆಯ್ಕೆ ಮಾಡಿಕೊಳ್ಳಲಾಗಿದ್ದು, ಮಕ್ಕಳಿಗೆ ವ್ಯವಹಾರ ಕುರಿತು ಜಾಗೃತಿ ಮೂಡಿಸಲು ಕಾರ್ಯಕ್ರಮ ಪೂರಕವಾಗಲಿದೆ ಎಂದರು.
ಇಲಾಖೆಯ ಸಂಪನ್ಮೂಲ ಅಧಿಕಾರಿ ವಿಠೋಬ ನಾಯಕ ಅವರು ಮಾತನಾಡಿ, ಖಚಿತ ಇದ್ದ ವಸ್ತುವಿಗೆ ಉಚಿತ ಇರುವುದರಲ್ಲ ಮತ್ತು ಉಚಿತ ಇದ್ದ ವಸ್ತು ಖಚಿತ ಇರುವುದಿಲ್ಲ ಇದನ್ನು ಅರಿತು ವ್ಯವಹರಿಸಬೇಕಾಗಿದೆ ಎಂದು ಮಕ್ಕಳಿಗೆ ಕಿವಿ ಮಾತು ಹೇಳಿದರು.
ಇಲಾಖೆಯ ತಾಲ್ಲೂಕು ಸಮನ್ವಯ ಅಧಿಕಾರಿ ಶಶಿಧರ್ ಬಿರಾದಾರ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಖರೀದಿ ನಂತರ ಕಡ್ಡಾಯ ರಶಿದಿ ಪಡೆಯಲು ಮರೆಯಬಾರದು ಎಂದು ಹೇಳಿದರು. ಶಾಲೆಯ ಮುಖ್ಯಗುರು ಸುಜಾತ ಮಹೇಶ, ಗ್ರಾಮದ ಮುಖಂಡರಾದ ಜಗನಾಥರಾಯ್ ಪಾಟೀಲ, ಇಲಾಖೆಯ ಅಧಿಕಾರಿಗಳಾದ ಜಿ. ಶರಣಪ್ಪ, ಗೋಪಾಲ ನಾಯಕ ಹಾಗೂ ಶಾಲೆಯ ಶಿಕ್ಷಕರಾದ ಜೈ ಲಿಂಗೇಗೌಡ, ವಿರೂಪಾಕ್ಷಯ್ಯ ಮಳಿಮಠ, ಮಲ್ಲಿಕಾರ್ಜುನ, ಶ್ರೀದೇವಿ, ಅಲಿಸಾಬ, ಸೌಮ್ಯ ಮತ್ತು ಹೇರುಂಡಿ ಗ್ರಾಮದ ಶಾಲೆಯ ಶಿಕ್ಷಕ ಮಹಾಂತೇಶ ಹಾಗೂ ಮಕ್ಕಳು ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.