ಬೆಂಗಳೂರು: ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಅವರಿಗೆ ಸ್ಥಾನ ತೆರವುಗೊಳಿಸುತ್ತಿರುವ ಎನ್.ಶಂಕರಪ್ಪ ಬುಧವಾರ ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಲು ನಿರ್ಧರಿಸಿದ್ದಾರೆ.
ವಿಧಾನ ಪರಿಷತ್ ಸಭಾಪತಿ ಡಿ.ಎಚ್.ಶಂಕರಮೂರ್ತಿ ಅವರನ್ನು ಅಂದು ಬೆಳಿಗ್ಗೆ ಭೇಟಿ ಮಾಡಿ ರಾಜೀನಾಮೆ ಪತ್ರ ಸಲ್ಲಿಸಲಿದ್ದಾರೆ. ಒಂದು ವೇಳೆ ಸಭಾಪತಿಯವರು ಅಂದು ಸಿಗದಿದ್ದರೆ ಗುರುವಾರ ಅಥವಾ ಶುಕ್ರವಾರ ರಾಜೀನಾಮೆ ನೀಡುವುದಾಗಿ ಅವರು `ಪ್ರಜಾವಾಣಿ~ಗೆ ತಿಳಿಸಿದರು.
ಜನಸಂಘದ ಕಾರ್ಯಕರ್ತರಾಗಿ ಬಿಜೆಪಿ ಜತೆ ನಂಟು ಬೆಳೆಸಿಕೊಂಡ ಶಂಕರಪ್ಪ ಅವರು ಹಿಂದುಳಿದ ಮಡಿವಾಳ ಸಮಾಜಕ್ಕೆ ಸೇರಿದವರು. ಕಳೆದ 31 ವರ್ಷಗಳಿಂದ ರಾಯಚೂರಿನಲ್ಲಿ ವಕೀಲಿ ವೃತ್ತಿ ಮಾಡುತ್ತಿದ್ದಾರೆ.
ರಾಜೀನಾಮೆ ನೀಡಿದ ಒಂದೆರಡು ದಿನದಲ್ಲೇ ಅವರನ್ನು ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರನ್ನಾಗಿ ರಾಜ್ಯ ಸರ್ಕಾರ ನೇಮಕ ಮಾಡಲಿದೆ ಎಂದು ತಿಳಿದುಬಂದಿದೆ.