ಲಿಂಗಸುಗೂರ: ಲಿಂಗಸುಗೂರ ತಹಸೀಲ್ದಾರ ಕಚೇರಿ ಪ್ರಭಾರಿ ಶಿರಸ್ತೆದಾರ ಶಂಕರಪ್ಪ ಗೌಡೂರು ಹಾಗೂ ದ್ವಿತೀಯ ದರ್ಜೆ ಸಹಾಯಕಿ ಶಹಿದಾಬೇಗಂ ಮುದ್ದೇಬಿಹಾಳ ಎಂಬುವವರು ಮಂಗಳವಾರ ರಾಯಚೂರು ಲೋಕಾಯುಕ್ತ ಪೊಲೀಸ್ ವರಿಷ್ಠಾಧಿಕಾರಿ ಎಸ್.ಬಿ. ಪಾಟೀಲ ಮಾರ್ಗದರ್ಶನದಲ್ಲಿ ನಡೆದ ದಾಳಿಯಲ್ಲಿ ಹಣ ಸ್ವೀಕರಿಸುತ್ತಿದ್ದಾಗ ಖುದ್ದು ಹಿಡಿದು ಬಂಧನಕ್ಕೆ ತೆಗೆದುಕೊಂಡು ಪ್ರಸಂಗ ವರದಿಯಾಗಿದೆ.
ಮಂಗಳವಾರ ಲೋಕಾಯುಕ್ತ ಅಧಿಕಾರಿಗಳ ತಂಡ ದೂರುದಾರ ಬಿ.ಆರ್. ಪಾಟೀಲ ಸಮೇತ ತಹಸೀಲ್ದಾರ ಕಚೇರಿಗೆ ದಾಳಿ ನಡೆಸಿದ್ದಾರೆ.
ಮಾತಿನಂತೆ ಆದೇಶ ಪ್ರತಿ ಪಡೆಯಲು ಕೇಳಿದ್ದ ಲಂಚ ರೂ. 3000 ಶಂಕರಪ್ಪ ಅವರಿಗೆ ನೀಡಲು ಮುಂದಾದ. ಆಗ ಶಂಕರಪ್ಪ ಅವರು ಶಾಖಾ ಸಿಬ್ಬಂದಿ ಶಹಿದಾಬೇಗಂ ಅವರಿಗೆ ತಲುಪಿಸಲು ಸೂಚಿಸಿದರು. ಆಗ ಶಹಿದಾಬೇಗಂ ಅವರಿಗೆ ಬಿ.ಆರ್. ಪಾಟೀಲ ಹಣ ನೀಡುತ್ತಿದ್ದಾಗ ಲೋಕಾಯುಕ್ತ ಅಧಿಕಾರಿಗಳು ಇಬ್ಬರನ್ನು ಬಂಧಿಸಿ ವಿಚಾರಣೆ ನಡೆಸಿದರು.
ದೂರುದಾದ ಬಿ.ಆರ್. ಪಾಟೀಲ ಕುಟುಂಬದ ಒಡೆತನದ ಜಮೀನಿಗೆ ನೀರು ತಂದುಕೊಳ್ಳಲು ಅಕ್ಕ ಪಕ್ಕದ ಜಮೀನಿನಲ್ಲಿ ಪೈಪಲೈನ್ ಹಾಕಿಕೊಂಡು ಬರಲು ತಹಸೀಲ್ದಾರ ಅವರಿಗೆ ಅರ್ಜಿ ಸಲ್ಲಿಸಿದ್ದರು. ತಹಸೀಲ್ದಾರ ಅವರು 2013ರ ಜನವರಿ 1ರಂದು ಪರವಾನಿಗೆ ಮಂಜೂರ ಮಾಡಿ ಆದೇಶ ಮಾಡಿದ್ದರು.
ಆದೇಶ ಪ್ರತಿ ನೀಡಲು ಅಲೆದಾಡಿಸಿ ಲಂಚ ಕೇಳಿದ್ದರಿಂದ ಬಿ.ಆರ್. ಪಾಟೀಲ ಲೋಕಾಯುಕ್ತಕ್ಕೆ ದೂರು ನೀಡಿದ್ದರು ಎಂದು ಲೋಕಾಯುಕ್ತ ಪೊಲೀಸ್ ವರಿಷ್ಠಾಧಿಕಾರಿ ಎಸ್.ಬಿ. ಪಾಟೀಲ ಸ್ಪಷ್ಟಪಡಿಸಿದರು.
ಪೊಲೀಸ್ ಇನ್ಸ್ಪೆಕ್ಟರ್ ಲಿಂಗಪ್ಪ ಹಾಗೂ ಇನ್ಸ್ಪೆಕ್ಟರ್ ದೌಲತ್ ಕುರಿ ಸಿಬ್ಬಂದಿಗಳಾದ ಆಜಮ್, ಶಂಕರಯ್ಯ, ಯಂಕಪ್ಪ, ಕುಮಾರ, ಶಿವಕುಮಾರ, ಈರಮ್ಮ, ಗಿರಿ, ತಿಮ್ಮಪ್ಪ ಮತ್ತಿತರರು ಪಾಲ್ಗೊಂಡಿದ್ದರು.