ಶನಿವಾರಸಂತೆ: ಪಟ್ಟಣ ಜನತೆ ಬುಧವಾರ ಗೌರಿ ಹಬ್ಬವನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಿದರು. ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಲ್ಲಿ ಸಾರ್ವಜನಿಕ ಗಣಪತಿ ಸೇವಾ ಸಮಿತಿಯಿಂದ ಗೌರಿ ಪ್ರತಿಷ್ಠಾಪಿಸಲಾಗಿದ್ದು, ವಿಶೇಷವಾಗಿ ಹೂಗಳಿಂದ ಅಲಂಕರಿಸಲಾಗಿತ್ತು.
ನೂತನ ವಸ್ತ್ರ ಧರಿಸಿದ ಮಹಿಳೆಯರು ಬಾವಿಗಳ ಮುಂದೆ ಗೌರಿ ಮೂರ್ತಿಮಾಡಿ ಕಳಸವಿಟ್ಟು, ಮಂಗಳ ದ್ರವ್ಯಗಳೊಂದಿಗೆ ಗಂಗೆ-ಗೌರಿಯರನ್ನು ಭಕ್ತಿಯಿಂದ ಪೂಜಿಸಿದರು. ಅರಿಶಿನ-ಕುಂಕುಮ, ಹೂ, ಗಾಜಿನ ಬಳೆ ನೀಡಿ ಶುಭಾಶಯ ವಿನಿಮಯ ಮಾಡಿದರು.
ಗೌರಿ ಹಬ್ಬ ಮಧ್ಯಾಹ್ನ ಕಿಚಡಿ, ಕೆಸುವಿನ ಸೊಪ್ಪಿನ ಸಾಂಬಾರು, ಪಾಯಸದ ಅಡಿಗೆ ಮಾಡಿ ಗೌರಿಗೆ ಎಡೆ ಇಟ್ಟು ಪೂಜಿಸಿದರು. ಸಂಜೆ ಮಹಿಳೆಯರು ಬಂಧು-ಸ್ನೇಹಿತರ ಮನೆಗೆ ತೆರಳಿ ಅರಿಶಿನ ಕುಂಕುಮ ಸ್ವೀಕರಿಸಿದರು.
ಪಟ್ಟಣದ ತ್ಯಾಗರಾಜ ಕಾಲೊನಿ, ಗುಂಡೂರಾವ್ ಬಡಾವಣೆ, ಕಾನ್ವೆಂಟ್ ರಸ್ತೆ ಮತ್ತಿತರೆ ಗೌರಿ ಮೂರ್ತಿಪ್ರತಿಷ್ಠಾಪಿಸಲಾಗಿದೆ. ಬೆಲೆ ಏರಿಕೆ ನಡುವೆಯೂ ಪಟ್ಟಣದ ಜನತೆ ಸಂಭ್ರಮ-ಸಡಗರದಿಂದ ಹಬ್ಬ ಆಚರಿಸಿದರು. ವಿವಿಧ ದೇವಾಲಯಗಳಲ್ಲೂ ವಿಶೇಷ ಪೂಜಾ ಕಾರ್ಯಗಳನ್ನು ಏರ್ಪಡಿಸಲಾಗಿತ್ತು.