ನವದೆಹಲಿ (ಪಿಟಿಐ): ಕಳೆದ ಭಾನುವಾರ ರಾಜಧಾನಿ ನವದೆಹಲಿಯಲ್ಲಿ ವಿದ್ಯಾರ್ಥಿನಿ ಮೇಲೆ ಬಸ್ನಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣ ಖಂಡಿಸಿ ಆಕ್ರೋಶಭರಿತರಾಗಿ ಪ್ರತಿಭಟನೆ ನಡೆಸಿದ ನೂರಾರು ವಿದ್ಯಾರ್ಥಿಗಳು ಶನಿವಾರವೂ ರಾಷ್ಟ್ರಪತಿ ಭವನದತ್ತ ತೆರಳುತ್ತಿದ್ದಾಗ ಪೊಲೀಸರು ಅವರತ್ತ ಅಶ್ರುವಾಯು ಹಾಗೂ ಜಲಫಿರಂಗಿ ಸಿಡಿಸಿದರು.
ಘಟನೆಯಲ್ಲಿ ಒಬ್ಬ ಹುಡುಗ, ಒಬ್ಬ ಹುಡುಗಿ ಹಾಗೂ ಒಬ್ಬರು ಸಂಚಾರಿ ಪೊಲೀಸರು ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಆದಾಗ್ಯೂ ಕೆಲವು ಪ್ರತಿಭಟನಾಕಾರರು ಪೊಲೀಸರತ್ತ ಪಾದರಕ್ಷೆಗಳನ್ನು ತೂರಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು.
ಒಬ್ಬ ಹುಡುಗಿ ಪೊಲೀಸರ್ ವಾಹನದ ಗಾಜನ್ನು ತನ್ನ ಕೈಗಳಿಂದ ಒಡೆದು ಹಾಕಿದ ದೃಶ್ಯ ಪ್ರತಿಭಟನಾಕಾರರಲ್ಲಿ ಹೆಪ್ಪುಗಟ್ಟಿದ್ದ ಆಕ್ರೋಶವನ್ನು ಪ್ರತಿಬಿಂಬಿಸುತ್ತಿತ್ತು. ಪ್ರತಿಭಟನಾ ಸ್ಥಳವು ರಣರಂಗದಂತಿತ್ತು.
ಗುಂಪು ರಾಷ್ಟ್ರಪತಿ ಭವನದ ಸಮೀಪ ಬರುತ್ತಿದ್ದಂತೆ ಪೊಲೀಸರು ಪ್ರತಿಭಟನಾಕಾರರೊಂದಿಗೆ ನಡೆಸಿದ ಮಾತುಕತೆ ಫಲನೀಡಲಿಲ್ಲ. ಗುಂಪು ಬ್ಯಾರಿಕೇಡ್ಗಳನ್ನು ಭೇದಿಸಿ ನುಗ್ಗುತ್ತಿದ್ದಂತೆ ಪೊಲೀಸರು ಲಾಠಿಪ್ರಹಾರ , ಅಶ್ರುವಾಯು ಪ್ರಯೋಗ ಹಾಗೂ ಜಲಫಿರಂಗಿಗಳನ್ನು ಸಿಡಿಸಬೇಕಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆದರೆ ಮಹಿಳಾ ಪ್ರತಿಭಟನಾಕಾರರು ಪೊಲೀಸರು ತಮ್ಮನ್ನು ಮನಬಂದಂತೆ ಥಳಿಸಿದರೆಂದು ದೂರಿದ್ದಾರೆ.
ಘಟನೆ ಖಂಡಿಸಿ ಸತತ 6ನೇ ದಿನ ನಡೆಯುತ್ತಿರುವ ಪ್ರತಿಭಟನೆಗೆ ಇಂಡಿಯಾ ಗೇಟ್ ಬಳಿ ಮಾಜಿ ಸೇನಾ ಮುಖ್ಯಸ್ಥ ವಿ.ಕೆ ಸಿಂಗ್ ತಮ್ಮ ಬೆಂಬಲ ಸೂಚಿಸಿದರು.