ಹುಬ್ಬಳ್ಳಿ: ಶಬರಿಮಲೆ ಸಮೀಪ ಶುಕ್ರವಾರ ರಾತ್ರಿ ನಡೆದ ರಸ್ತೆ ಅಪಘಾತ ಮತ್ತು ಕಾಲ್ತುಳಿತದಲ್ಲಿ ಸತ್ತವರಲ್ಲಿ ಉತ್ತರ ಕರ್ನಾಟಕದ ಮತ್ತೆ ಐವರು ಸೇರಿದ್ದು, ಸತ್ತವರ ಸಂಖ್ಯೆ 20ಕ್ಕೇರಿದಂತಾಗಿದೆ.
ಬೆಳಗಾವಿ ನಗರದ ಮೂವರು ಸಾವನ್ನಪ್ಪಿರುವುದು ಭಾನುವಾರ ದೃಢಪಟ್ಟಿದೆ. ಇದರಿಂದಾಗಿ ಜಿಲ್ಲೆಯಲ್ಲಿ ಸತ್ತವರ ಸಂಖ್ಯೆ 10ಕ್ಕೆ ಏರಿದೆ. ಭಾರತ ನಗರದ ನಿವಾಸಿಗಳಾದ ಆನಂದ ಮಾರುತಿ ಗೊಲ್ಲರ (18), ನಾಗಪ್ಪ ಅಪ್ಪಯ್ಯ ಇಟಗಿ (21) ಹಾಗೂ ಯಲ್ಲಪ್ಪ ಮಾರುತಿ ಗೊಲ್ಲರ (27) ಎಂಬುವವರೇ ಮೃತಪಟ್ಟಿದ್ದಾರೆ.
ವಿಜಾಪುರ ಜಿಲ್ಲೆಯ ಬೋಳಚಿಕ್ಕಲಕಿ ಗ್ರಾಮದ ಬಸವರಾಜ ಸಂಗಪ್ಪ ಅಂಗಡಿ(32) ಶಬರಿಮಲೆಯಲ್ಲಿ ಕಾಲ್ತುಳಿತಕ್ಕೆ ಈಡಾಗಿ ಕೊನೆಯುಸಿರೆಳೆದಿದ್ದಾರೆ. ಮುಧೋಳ ತಾಲ್ಲೂಕಿನ ಮಂಟೂರಿನ ಶ್ರೀಕಾಂತ ಶ್ರೀಶೈಲ ತಿಮ್ಮಾಪುರ (30) ಕಾಲ್ತುಳಿತಕ್ಕೆ ಬಲಿಯಾಗಿದ್ದಾರೆ.