ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶರಣರ ಹಾದಿ ಹಿಡಿದರೆ ಜಗತ್ತಿನಲ್ಲಿ ಸಮೃದ್ಧಿ

Last Updated 21 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಚಿತ್ರದುರ್ಗ: ನಗರದ ಮುರುಘಾಮಠದ ಆವರಣದಲ್ಲಿ ಭಾನುವಾರ ಬೆಳಿಗ್ಗೆ 7.30ಕ್ಕೆ ಬಸವತತ್ವ ಧ್ವಜಾರೋಹಣ ನೆರವೇರಿಸುವ ಮೂಲಕ ಶರಣ ಸಂಸ್ಕೃತಿ ಉತ್ಸವಕ್ಕೆ ವಿಧ್ಯುಕ್ತವಾಗಿ ಚಾಲನೆ ನೀಡಲಾಯಿತು.

ಬಸವ ತತ್ವ ಧ್ವಜಾರೋಹಣ ನೆರೆವೇರಿಸಿ ಮಾತನಾಡಿದ ಟಿ. ನರಸೀಪುರ ನಳಂದ ಬುದ್ಧವಿಹಾರದ ಬಂತೆ ಬೋಧಿರತ್ನ ಅವರು, ಸಕಲ ಜೀವಿಗಳಿಗೂ ಲೇಸನ್ನು ಬಯಸಿದ ಬಸವಣ್ಣನವರ ಹಾದಿಯಲ್ಲಿ ಸಾಗುತ್ತಿರುವ ಶಿವಮೂರ್ತಿ ಮುರುಘಾ ಶರಣರ ಮಾರ್ಗ ನಿಜಕ್ಕೂ ಶ್ಲಾಘನೀಯ. ಇದರಿಂದ ಈ ದೇಶ, ಜಗತ್ತು, ಸಮೃದ್ಧಿ ಹೊಂದುತ್ತದೆ. ಅಂತರಂಗ ಶುದ್ಧಿಯಾಗಲು ಶರಣರು ಹಾಕಿಕೊಟ್ಟ ಹಾದಿಯಲ್ಲಿ ಎಲ್ಲರೂ ನಡೆಯಲಿ ಎಂದು ಆಶಿಸಿದರು.  ಶಿವಮೂರ್ತಿ ಮುರುಘಾ ಶರಣರು, ಉತ್ಸವ ಸಮಿತಿ ಅಧ್ಯಕ್ಷ ಜೆ.ಎಂ. ಜಯಕುಮಾರ್, ಮಠಾಧೀಶರು, ಭಕ್ತರು ಪಾಲ್ಗೊಂಡಿದ್ದರು.

ನಂತರ ಮುರುಘಾಮಠದ ಅನುಭವಮಂಟಪದ ಶರಣರ ಹರಳಯ್ಯ ಮಧುವಯ್ಯ ವೇದಿಕೆಯಲ್ಲಿ ಶಿವಮೂರ್ತಿ ಮುರುಘಾ ಶರಣರು ಸಹಜ ಶಿವಯೋಗ ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು.

ಈ ಸಂದರ್ಭದಲ್ಲಿ ಮಾತನಾಡಿದ ಶರಣರು, ಬಸವಣ್ಣ, ಬುದ್ಧ, ಏಸು, ಪೈಗಂಬರ್ ಅಂತಃಸಾಕ್ಷಿ ಮೂಲಕ ದೊಡ್ಡವರಾದವರು. ಮನುಜರೆಲ್ಲರೂ ಒಂದು ಶಕ್ತಿಯಾಗಬೇಕು. ಈ ಶಕ್ತಿಯಿಂದ ಮಾತ್ರ ಒಂದು ಸಂಘಟನೆ ಕಟ್ಟಲು ಮತ್ತು ನಡೆಸಲು ಸಾಧ್ಯ. ಶಕ್ತಿ ಇಲ್ಲದೇ ಸಂಘಟನೆ ಇಲ್ಲ. ಅರಿವೇ ಗುರು, ಗುರುವೇ ಶಕ್ತಿ, ಶಕ್ತಿಯೇ ಸಂಘಟನೆ. ಈ ಸಂಘಟನೆಯಿಂದಲೇ ಸಮಾಜದಲ್ಲಿ ಸುಧಾರಣೆಯಾದರೆ ಬಸವವಣ್ಣನವರ ತತ್ವ ಸಿದ್ಧಾಂತಗಳಿಗೆ ಒಂದು ಅರ್ಥ ಬರುತ್ತದೆ. ಆಗ ಮಾತ್ರ ಜಗತ್ತು ಸಮೃದ್ಧಿ ಹೊಂದುತ್ತದೆ ಎಂದು ನುಡಿದರು.

ನಿಶ್ಯಕ್ತಿಯಿಂದ ಬದುಕಲು ಸಾಧ್ಯವಿಲ್ಲ. ಧ್ಯಾನ ಯೋಗದಿಂದ ಮಾತ್ರ ನಾವುಗಳು ಶಕ್ತಿಯಾದಾಗ, ಸಂಘಟನೆ ಮುನ್ನಡೆಸಿದಾಗ ಬದುಕು ಸಾರ್ಥಕವಾಗುವುದರಲ್ಲಿ ಸಂಶಯವಿಲ್ಲ. ಅಜ್ಞಾನದ ಬದುಕಿನಿಂದ ಕಳ್ಳತನ, ದುರ್ನಡತೆ, ಅಮಾನವೀಯ ಭಯೋತ್ಪಾದನೆಗೆ ಕಾರಣಗುತ್ತದೆ. ಇಂತಹ ದುಷ್ಕೃತ್ಯಗಳನ್ನು ನಿರ್ಮೂಲನೆ ಮಾಡಲು ಅರಿವು ಮತ್ತು ಜ್ಞಾನದಿಂದ ಮಾತ್ರ ಸಾಧ್ಯ ಎಂದು ಪ್ರತಿಪಾದಿಸಿದರು.


 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT