ಹೈದರಾಬಾದ್: ಅಕ್ರಮ ಗಣಿಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆಂಧ್ರ ಪ್ರದೇಶದ ಐಎಎಸ್ ಅಧಿಕಾರಿ ವೈ.ಶ್ರೀಲಕ್ಷ್ಮಿ ಅವರು ಶುಕ್ರವಾರ ನಿಯೋಜಿತ ನ್ಯಾಯಾಲಯಕ್ಕೆ ಶರಣಾಗಿದ್ದು, ಅವರನ್ನು ಚಂಚಲಗುಡ ಕೇಂದ್ರ ಕಾರಾಗೃಹಕ್ಕೆ ಕಳುಹಿಸಲಾಗಿದೆ.
ಸಿಬಿಐ ವಿಶೇಷ ನ್ಯಾಯಾಲಯ ಅವರ ನ್ಯಾಯಾಂಗ ಬಂಧನವನ್ನು ಇದೇ 12ರವರೆಗೆ ವಿಸ್ತರಿಸಿದೆ. ಇದೇ ತಿಂಗಳ ಒಂದರಂದು ಆಂಧ್ರ ಪ್ರದೇಶ ಹೈಕೋರ್ಟ್, ಶ್ರೀಲಕ್ಷ್ಮಿ ಅವರ ಜಾಮೀನನ್ನು ರದ್ದುಗೊಳಿಸಿತ್ತು. ಅಲ್ಲದೆ ಅವರ ಶರಣಾಗತಿಗೆ ಶುಕ್ರವಾರದ ಗಡುವು ನೀಡಿತ್ತು. ನವೆಂಬರ್ 28ರಂದು ಶ್ರೀಲಕ್ಷ್ಮಿ ಅವರನ್ನು ಬಂಧಿಸಿದ್ದ ಸಿಬಿಐ, ಎರಡು ದಿನ ಅವರನ್ನು ವಿಚಾರಣೆಗೆ ಒಳಪಡಿಸಿತ್ತು. ನಂತರ ಅವರಿಗೆ ಜಾಮೀನು ದೊರೆತಿತ್ತು.
`ಶ್ರೀಲಕ್ಷ್ಮಿ ಅವರನ್ನು ಈಗಲೇ ಬಿಡುಗಡೆ ಮಾಡಬಾರದಿತ್ತು. ಇದರಿಂದ ತನಿಖೆಗೆ ತೊಂದರೆಯಾಗುತ್ತದೆ~ ಎಂದು ಸಿಬಿಐ ಕೋರ್ಟ್ಗೆ ಮನವಿ ಸಲ್ಲಿಸಿತ್ತು. ಇದಕ್ಕೆ ಪ್ರತಿಕ್ರಿಯಿಸಿದ್ದ ಶ್ರೀಲಕ್ಷ್ಮಿ, ಒಎಂಸಿ ಅಕ್ರಮ ಗಣಿಗಾರಿಕೆಗೂ ತಮಗೂ ಸಂಬಂಧ ಇಲ್ಲ, ತಾವು ಕೈಗಾರಿಕೆ ಹಾಗೂ ವಾಣಿಜ್ಯ ಇಲಾಖೆ ಕಾರ್ಯದರ್ಶಿಯಾಗಿ ಅಧಿಕಾರಕ್ಕೆ ಬರುವ ಮುನ್ನವೇ ಅಂದರೆ 2005ರಲ್ಲೇ ಕಂಪೆನಿಗೆ ಗಣಿ ಗುತ್ತಿಗೆ ನೀಡಲಾಗಿತ್ತು ಎಂದು ಹೇಳಿದ್ದರು.