ಮೊಳಕಾಲ್ಮುರು: ಸಮಾಜದಲ್ಲಿ ಹೆಚ್ಚುತ್ತಿರುವ ಕಲುಷಿತ ತಡೆಯಲು ಧಾರ್ಮಿಕ ಕಾರ್ಯಗಳಿಂದ ಮಾತ್ರ ಸಾಧ್ಯ ಎಂದು ಮರಿಯಮ್ಮನಹಳ್ಳಿ ಗುರುಪಾದದೇವರ ಮಠದ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ತಾಲ್ಲೂಕಿನ ರಾಂಪರದ `ಕೆರೆಕೊಂಡಾಪುರ ರುದ್ರಾಕ್ಷಿ ಮಠ~ ಆವರಣದಲ್ಲಿ ಮಂಗಳವಾರ ಸಂಜೆ ಆರಂಭವಾದ ಶರವನ್ನರಾತ್ರಿ ದಸರಾ ಮಹೋತ್ಸವ ಉದ್ಘಾಟನೆ ಕಾರ್ಯಕ್ರಮದ ನೇತೃತ್ವ ವಹಿಸಿ ಅವರು ಮಾತನಾಡಿದರು.
ಧಾರ್ಮಿಕ ಕಾರ್ಯಕ್ರಮಗಳಲ್ಲಿ ಹೆಚ್ಚಾಗಿ ಭಾಗವಹಿಸಿ ಆಧ್ಯಾತ್ಮಿಕ ಅರಿವು ಬೆಳೆಸಿಕೊಳ್ಳಬೇಕಿದೆ. ಇಂತಹ ಕಾರ್ಯಕ್ರಮಗಳನ್ನು ಧಾರ್ಮಿಕ ಕ್ಷೇತ್ರದಲ್ಲಿ ಇರುವವರು ಹೆಚ್ಚಾಗಿ ಆಯೋಜನೆ ಮಾಡಬೇಕು. ಈ ನಿಟ್ಟಿನಲ್ಲಿ ಗಡಿಭಾಗದ ರಾಂಪುರದಲ್ಲಿ ರುದ್ರಾಕ್ಷಿಮಠ ಕಾರ್ಯವೈಖರಿ ಶ್ಲಾಘನೀಯ ಎಂದು ಹೇಳಿದರು.
ಪ್ರಾಂಶುಪಾಲ ಜಗನ್ನಾಥ ಹಿರೇಮಠ ಮಾತನಾಡಿ, ಧರ್ಮಗಳು ಹಲವು ಇರಬಹುದು, ಆದರೆ, ವೀರಶೈವ ಧರ್ಮ ಮಾತ್ರ ಎಲ್ಲಾ ಧರ್ಮಗಳನ್ನು ಸಮನಾಗಿ ಕಂಡು ಒಗ್ಗಟ್ಟಾಗಿ ನಡೆಸಿಕೊಂಡು ಹೋಗುವ ಸಾಮರ್ಥ್ಯ ಹೊಂದಿದೆ ಎಂದು ಹೇಳಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕೆ. ರಾಯಾಪುರ ಮಠದ ಶಿವಣ್ಣ ತಾತಾ ಮಾತನಾಡಿ, ಜೀವನದಲ್ಲಿ ಶಾಂತಿ, ಸಹಬಾಳ್ವೆ, ದೇವರ ಸ್ಮರಣೆ ಅಳವಡಿಸಿಕೊಂಡಲ್ಲಿ ಮಾತ್ರ ಉಜ್ವಲ ಭವಿಷ್ಯವಿರುವ ಜೀವನ ನಡೆಸಲು ಸಾಧ್ಯವಿದೆ. ಹಣದಿಂದ ಎಲ್ಲವನ್ನು ಪಡೆದುಕೊಳ್ಳಲು ಸಾಧ್ಯವಿಲ್ಲ ಎಂಬುದನ್ನು ಮೊದಲು ಮನಗಾಣಬೇಕು ಎಂದು ಹೇಳಿದರು.
ಪ್ರಾಸ್ತಾವಿಕವಾಗಿ ಮಠದ ಡಾ. ವೀರಭದ್ರ ಸ್ವಾಮೀಜಿ ಮಾತನಾಡಿದರು.ವೀರಭದ್ರಸ್ವಾಮೀಜಿ, ವೀರಶೈವ ಮಹಾಸಭಾ ಜಿಲ್ಲಾಧ್ಯಕ್ಷ ಪಿ.ಕೆ. ಕುಮಾರಸ್ವಾಮಿ, ಶೇಖರಯ್ಯ ಸ್ವಾಮಿ, ಬಿ.ಪಿ. ರಾಜು ಉಪಸ್ಥಿತರಿದ್ದರು.
ಶಿಕ್ಷಕ ಎನ್. ಗುರುಸಿದ್ದಯ್ಯ ಸ್ವಾಗತಿಸಿದರು. ಉಪನ್ಯಾಸಕ ಡಿ. ಮೋಹನ್ ಕಾರ್ಯಕ್ರಮ ನಿರೂಪಿಸಿದರು.
ಸೆ. 23ರವರೆಗೆ ಮಠದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು, ಪುರಾಣ ಪ್ರವಚನ ನಡೆಯಲಿದೆ.