ಹೊನ್ನಾವರ: `ಮನುಷ್ಯನ ಜೀವನ ವಿಧಾನ ವಾಣಿಜ್ಯೀಕರಣಗೊಳ್ಳುತ್ತಿರುವ ಪ್ರಸಕ್ತ ಸನ್ನಿವೇಶದಲ್ಲಿ ಗ್ರಾಮೀಣ ಭಾಗದ ಸಂಸ್ಕೃತಿ ಹಾಗೂ ಕಲೆಯನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಅಗತ್ಯ ಚಿಂತನೆ ಹಾಗೂ ಪ್ರಯತ್ನ ನಡೆಯಬೇಕಿದೆ' ಎಂದು ಸಾವಯವ ಕೃಷಿ ಮಿಷನ್ ಅಧ್ಯಕ್ಷ ಅ.ಶ್ರೀ.ಆನಂದ ಅಭಿಪ್ರಾಯಪಟ್ಟರು.
ಶರಾವತಿ ಸಾಂಸ್ಕೃತಿಕ ವೇದಿಕೆಯ ಆಶ್ರಯದಲ್ಲಿ ಇಲ್ಲಿನ ಪೊಲೀಸ್ ಪರೇಡ್ ಮೈದಾನದಲ್ಲಿ ಮೂರು ದಿನಗಳ ಕಾಲ ನಡೆಯುವ ಶರಾವತಿ ಉತ್ಸವವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.
ಬರಹಗಾರ ಶಿವಾನಂದ ಕಳವೆ, ಪೊಲೀಸ್ ಅಧಿಕಾರಿ ಎನ್.ಟಿ. ಪ್ರಮೋದರಾವ್, ಮಾಜಿ ಶಾಸಕ ಆರ್.ಎಸ್.ಭಾಗವತ, ಹಿರಿಯ ವೈದ್ಯ ಡಾ.ಅರುಣ ಜಿ.ಕಾರ್ಕಳ, ಸುಗಮ ಸಂಗೀತ ಗಾಯಕ ಗರ್ತಿಕೆರೆ ರಾಘವೇಂದ್ರ ರಾವ್, ಶರಾವತಿ ಸಾಂಸ್ಕೃತಿಕ ವೇದಿಕೆಯ ಅಧ್ಯಕ್ಷ ವೆಂಕಟ್ರಮಣ ಹೆಗಡೆ ಉಪಸ್ಥಿತರಿದ್ದರು.
ವೇದಿಕೆಯ ಗೌರವಾಧ್ಯಕ್ಷ ಪಿ.ಎಸ್.ಭಟ್ಟ ಉಪ್ಪೋಣಿ ಸ್ವಾಗತಿಸಿದರು.
ಉತ್ಸವದಲ್ಲಿ ಇಂದು : ಶರಾವತಿ ಉತ್ಸವದ ಎರಡನೆ ದಿನವಾದ ಇದೇ 15 ರಂದು ಮಧ್ಯಾಹ್ನ 3ಕ್ಕೆ ಜಿಲ್ಲಾ ಮಟ್ಟದ ಭರತನಾಟ್ಯ ಸ್ಪರ್ಧೆ ನಡೆಯಲಿದ್ದು ಸಂಜೆ 5.30ಕ್ಕೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಸಚಿವ ವಿಶ್ವೇಶ್ವರ ಹೆಗಡೆ ಕಾಗೇರಿ, ಡಿವೈಎಸ್ಪಿ ಸಿ.ಎಚ್.ಸುಧೀರಕುಮಾರ ರೆಡ್ಡಿ, ಡಿ.ಎನ್.ನಾಯಕ ಅಂಕೋಲಾ, ಬಿಸಿಸಿ ಅಧ್ಯಕ್ಷ ಶಿವಾನಂದ ಹೆಗಡೆ ಕಡತೋಕ ಭಾಗವಹಿಸುವರು.
ಯಕ್ಷಗಾನ ಕಲಾವಿದರಾದ ಗೋಡೆ ನಾರಾಯಣ ಹೆಗಡೆ,ಕೃಷ್ಣ ಯಾಜಿ ಇಡಗುಂಜಿ,ಸಂಗೀತಗಾರ ಅರ್ಜುನ ನಾಡಿಗೇರ ಕುಂದಗೋಳವಾಡೆ ಅವರನ್ನು ಸನ್ಮಾನಿಸಲಾಗುವುದು.
ಸಿರಿ ರಾಜೇಶ ಕಿಣಿ ಅವರಿಂದ ಭರತನಾಟ್ಯ, ಸುಬ್ರಹ್ಮಣ್ಯ ಶಾಸ್ತ್ರಿ ಕರ್ಕಿ ಅವರಿಂದ ತಬಲಾ ಸೋಲೊ, ಉದಯ ಅಂಕೋಲಾ ಅವರಿಂದ ಗಾಯನ, ಪೂರ್ಣಚಂದ್ರ ಮೇಳದಿಂದ ಯಕ್ಷಗಾನ ಪ್ರದರ್ಶನ ನಡೆಯುವುದು.