ಹೊಸನಗರ: ಪ್ರಬಲ ಟಿವಿ ಮಾಧ್ಯಮದ ಪ್ರಭಾವದಿಂದಾಗಿ ಈ ನೆಲದ ಸೊಗಡಿನ ಜನಪದ ಕಲೆಗಳು ನಶಿಸಿ ಹೋಗುತ್ತಿರುವುದು ಈ ಪೀಳಿಗೆಯ ದೊಡ್ಡ ದುರಂತ ಎಂದು ಜಿ.ಪಂ. ಅಧ್ಯಕ್ಷೆ ಶುಭಾ ಕೃಷ್ಣಮೂರ್ತಿ ವಿಷಾದಿಸಿದರು.
ಬೆಂಗಳೂರಿನ ಕಲಾತೀರ ಸಂಸ್ಥೆ ಹಾಗೂ ವಿವಿಧ ಇಲಾಖೆಗಳ ಆಶ್ರಯದಲ್ಲಿ ಶುಕ್ರವಾರ ಪಟ್ಟಣದ ನೆಹರು ಮೈದಾನದಲ್ಲಿ 3 ದಿನದ ಶರಾವತಿ ರಾಷ್ಟ್ರೀಯ ಜಾನಪದ ಉತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ತಾ.ಪಂ. ಅಧ್ಯಕ್ಷೆ ಸುಮಾ ಸುಬ್ರಹ್ಮಣ್ಯ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ವಿವಿಧ ರಾಜ್ಯಗಳ ಜನಪದ ಕಲೆಗಳ ವೀಕ್ಷಣೆ ಹಾಗೂ ಅಧ್ಯಯನಕ್ಕೆ ಇದೊಂದು ಉತ್ತಮ ಅವಕಾಶ ಎಂದರು.
ಜಿ.ಪಂ. ಸದಸ್ಯರಾದ ಜ್ಯೋತಿ ಚಂದ್ರಮೌಳಿ, ಪಂ.ಪಂ. ಅಧ್ಯಕ್ಷ ಅರುಣ್ಕುಮಾರ್, ಕಲಾತೀರ ಸಂಸ್ಥೆಯ ಸಂಚಾಲಕ ಉದಯಕುಮಾರ್ ಶೆಟ್ಟಿ, ಚಿತ್ರನಟ ಜಯರಾಮ್, ವಿಮರ್ಶಕ ಮೈಸೂರು ಕೃಷ್ಣಮೂರ್ತಿ ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಹಾಜರಿದ್ದರು.
ಪ.ಪಂ. ಮಾಜಿ ಅಧ್ಯಕ್ಷ ಡಿ.ಎಂ. ರತ್ನಾಕರ ಶೆಟ್ಟಿ ಪ್ರಾಸ್ತಾವಿಕ ಮಾತನಾಡಿ, 14 ರಾಜ್ಯದ ಜನಪದ ಕಲೆಗಳನ್ನು ಪರಿಚಯಿಸುವ ನಿಟ್ಟಿನಲ್ಲಿ ಉತ್ಸವ ಹಮ್ಮಿಕೊಳ್ಳಲಾಗಿದೆ ಎಂದರು. ಬಿ.ಎಸ್. ಸುರೇಶ್ ಕಾರ್ಯಕ್ರಮ ನಿರೂಪಿಸಿದರು.