ಹೊಸನಗರ (ಶಿವಮೊಗ್ಗ ಜಿಲ್ಲೆ): ತಾಲ್ಲೂಕಿನ ಅರಮನೆಕೊಪ್ಪ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಶರಾವತಿ ಹಿನ್ನೀರಿನ ಬಿಲ್ಸಾಗರ ಎಂಬಲ್ಲಿ 4 ಮೃತ ದೇಹಗಳು ಬುಧವಾರ ಸಂಜೆ ಪತ್ತೆಯಾಗಿವೆ.
ಮೃತಪಟ್ಟವರನ್ನು ತ್ರಿಣಿವೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕಾರ್ಗಡಿ ಗ್ರಾಮದ ವಿಧವೆ ಗೀತಾ, ಅವರ ಎರಡು ಗಂಡು ಮಕ್ಕಳಾದ ರಕ್ಷಿತ್ (11), ಗಗನ್ (7) ಹಾಗೂ ಪ್ರಿಯಕರ ವಡ್ಡಿಕಣಿವೆ ಗೋಪಾಲ ಎಂದು ಗುರುತಿಸಲಾಗಿದೆ.
ಎರಡು ಮಕ್ಕಳ ತಾಯಿ ಗೀತಾ ಹಾಗೂ ಗೋಪಾಲ ನಡುವಿನ ಅನೈತಿಕ ಸಂಬಂಧ ಕುರಿತಂತೆ ಗ್ರಾಮಸ್ಥರು ಈಚೆಗೆ ಛೀಮಾರಿ ಹಾಕಿ ಅವಮಾನ ಮಾಡಿದ ಹಿನ್ನೆಲೆಯಲ್ಲಿ ಶರಾವತಿ ಹಿನ್ನೀರಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಶಂಕಿಸಲಾಗಿದೆ.
ಹೊಸನಗರ ತಾಲ್ಲೂಕಿನ ನಗರ ಪೊಲೀಸ್ ಠಾಣೆ ಪಿಎಸ್ಐ ಸಂತೋಷ್ರಾಮ್ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ನಡೆಸುತ್ತಿದ್ದಾರೆ.