ಬೆಂಗಳೂರು: ಬೆಂಗಳೂರು ಮಹಾನಗರ ಕಾರ್ಯಪಡೆ (ಬಿಎಂಟಿಎಫ್) ಮುಖ್ಯಸ್ಥ ಎಡಿಜಿಪಿ ಆರ್.ಪಿ. ಶರ್ಮ ಅವರನ್ನು ವರ್ಗಾವಣೆ ಮಾಡಿ ಸರ್ಕಾರ ಹೊರಡಿಸಿದ್ದ ಆದೇಶವನ್ನು ರದ್ದುಗೊಳಿಸಿದ್ದ ಕೇಂದ್ರೀಯ ಆಡಳಿತಾತ್ಮಕ ನ್ಯಾಯಮಂಡಳಿಯ ಆದೇಶಕ್ಕೆ ಹೈಕೋರ್ಟ್ ಆಂಶಿಕ ತಡೆಯಾಜ್ಞೆ ನೀಡಿದೆ.
ಬಿಎಂಟಿಎಫ್ ಮುಖ್ಯಸ್ಥ ಸ್ಥಾನದಿಂದ ಶರ್ಮ ಅವರನ್ನು ವರ್ಗಾವಣೆ ಮಾಡಿದ್ದನ್ನು ರದ್ದು ಮಾಡಿದ್ದ ಸಿಎಟಿ ಆದೇಶ ಪ್ರಶ್ನಿಸಿ ಸರ್ಕಾರ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎನ್.ಕೆ. ಪಾಟೀಲ್ ಮತ್ತು ನ್ಯಾಯಮೂರ್ತಿ ಬಿ.ಎಸ್. ಇಂದ್ರಕಲಾ ನೇತೃತ್ವದ ವಿಭಾಗೀಯ ಪೀಠ ಈ ಆದೇಶ ನೀಡಿದೆ.
ಶರ್ಮ ಅವರ ವರ್ಗಾವಣೆ ರದ್ದು ಮಾಡಿದ್ದ ಆದೇಶಕ್ಕೆ ನ್ಯಾಯಪೀಠ ತಡೆಯಾಜ್ಞೆ ನೀಡಿಲ್ಲ. ಆದರೆ ಈ ಆದೇಶದಲ್ಲಿ ಸಿಎಟಿ ನೀಡಿದ್ದ ಇತರ ಕೆಲವು ನಿರ್ದೇಶನಗಳಿಗೆ ತಡೆ ನೀಡಲಾಗಿದೆ.