ಬೆಂಗಳೂರು: ವಿಶಿಷ್ಟ ಸೇವೆಗಾಗಿ ರಾಷ್ಟ್ರಪತಿಗಳು ನೀಡುವ ಪದಕಕ್ಕೆ ಐಪಿಎಸ್ ಅಧಿಕಾರಿ, ಬೆಂಗಳೂರು ಮಹಾನಗರ ಕಾರ್ಯಪಡೆ (ಬಿಎಂಟಿಎಫ್) ಮುಖ್ಯಸ್ಥ ಆರ್.ಪಿ. ಶರ್ಮಾ ಅವರ ಹೆಸರನ್ನು ಇದೇ 26ರೊಳಗೆ ಪರಿಗಣಿಸಬೇಕು ಎಂದು ಕೇಂದ್ರ ಗೃಹ ಸಚಿವಾಲಯಕ್ಕೆ ಕೆಂದ್ರ ಆಡಳಿತ ನ್ಯಾಯಮಂಡಳಿ ಗುರುವಾರ ಆದೇಶಿಸಿದೆ.
ರಾಜ್ಯ ಸರ್ಕಾರದ ಉನ್ನತಾಧಿಕಾರ ಸಮಿತಿ ಈ ಪದಕಕ್ಕೆ ಶರ್ಮಾ ಹೆಸರನ್ನು ಶಿಫಾರಸು ಮಾಡಿತ್ತು. ಆದರೆ ರಾಜ್ಯ ಸರ್ಕಾರಕ್ಕೆ ಪತ್ರ ಬರೆದ ಕೇಂದ್ರ ಗೃಹ ಸಚಿವಾಲಯ, ಶರ್ಮಾ ಅವರ ವಿರುದ್ಧ ಯಾವುದೇ ಪ್ರಕರಣ ವಿಚಾರಣೆಯ ಹಂತದಲ್ಲಿದೆಯೇ ಎಂದು ಪ್ರಶ್ನಿಸಿತ್ತು.
ಈ ಪತ್ರವನ್ನು ಪ್ರಶ್ನಿಸಿ ಶರ್ಮಾ ಅವರು ಸಿಎಟಿ ಮೆಟ್ಟಿಲೇರಿದ್ದರು. ಆದರೆ ಅವರ ವಿರುದ್ಧ ಯಾವುದೇ ಪ್ರಕರಣ ವಿಚಾರಣೆಯ ಹಂತದಲ್ಲಿಲ್ಲ ಎಂಬುದನ್ನು ಪರಿಗಣಿಸಿದ ಸಿಎಟಿ, ಈ ಆದೇಶ ನೀಡಿದೆ.