ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶವ ಪರೀಕ್ಷೆಗೆ ವೈದ್ಯರ ನಿರಾಕರಣೆ: ಜನತೆಯ ಪ್ರತಿಭಟನೆ

Last Updated 25 ಡಿಸೆಂಬರ್ 2012, 6:06 IST
ಅಕ್ಷರ ಗಾತ್ರ

ಆಲಮಟ್ಟಿ: ನಿಡಗುಂದಿ ಪಟ್ಟಣದ ಬಾವಿಯೊಂದರಲ್ಲಿ  ಬಿದ್ದು ಮೃತಪಟ್ಟ ಮಹಿಳೆಯ ಶವಪರೀಕ್ಷೆ ಮಾಡಲು ಅನಗತ್ಯ ವಿಳಂಬ ಧೋರಣೆ ಅನು ಸರಿಸಿದ ವೈದ್ಯರ ವಿರುದ್ಧ ನಿಡಗುಂದಿಯ ನೂರಾರು ಜನರು ಸೋಮವಾರ ಸಮುದಾಯ ಆರೋಗ್ಯ ಕೇಂದ್ರದ ಎದುರು ಪ್ರತಿಭಟನೆ ನಡೆಸಿದರು.

ಹಿನ್ನೆಲೆ: ಎರಡು ದಿನಗಳ ಹಿಂದೆ ನಿಡಗುಂದಿ ಪಟ್ಟಣದ ರವಿ ಪತ್ತಾರ ಎಂಬ ಯುವಕ ಮೃತಪಟ್ಟಿದ್ದ. ಮಗನ ಅಗಲುವಿಕೆಯ ನೋವನ್ನು ತಾಳದೇ ತಾಯಿ ಸುಮಿತ್ರಾ ಸಲಬಣ್ಣಾ ಪತ್ತಾರ (55) ಸೋಮವಾರ ಬೆಳಿಗ್ಗೆ ನಿಡಗುಂದಿಯ ಗ್ರಾ.ಪಂ. ಕಚೇರಿ ಹತ್ತಿರದ ಸವುಳು ಬಾವಿಯಲ್ಲಿ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದರು.

ಸುದ್ದಿ ತಿಳಿದ ಸಾರ್ವಜನಿಕರು, ನಿಡಗುಂದಿ ಪೊಲೀಸರು ಅವರ  ಮೃತದೇಹವನ್ನು ಹೊರತೆಗೆದು ನಿಡಗುಂದಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಶವಪರೀಕ್ಷೆಗೆ ತಂದರು.

ಅಲ್ಲಿದ್ದ ವೈದ್ಯಾಧಿಕಾರಿ ಡಾ. ವಿಶ್ವನಾಥ ಕುರಿ ಅವರನ್ನು ಸಂಪರ್ಕಿಸಿದ ಸಾರ್ವಜನಿಕರು, ಮೃತಳ ಸಂಬಂಧಿಕರು ಆದಷ್ಟು ಬೇಗ ಶವಪರೀಕ್ಷೆ ಮಾಡಿ ಕೊಡಲು ವಿನಂತಿಸಿದರು. ಅದಕ್ಕೆ ವೈದ್ಯಾಧಿಕಾರಿ ಡಾ. ಕುರಿ ಪಟ್ಟಣದ ಅಂಗಡಿಯೊಂದರ ಶುಭ ಸಮಾರಂಭಕ್ಕೆ ಹೋಗುತ್ತಿದ್ದೇನೆ ಬಂದ ನಂತರ ಶವಪರೀಕ್ಷೆ ಮಾಡಿಕೊಡುತ್ತೇನೆ ಎಂದು ಹೇಳಿ ಹೊರಟರು. ಮುಕ್ಕಾಲು ಗಂಟೆಯ ನಂತರವೂ ವೈದ್ಯರು ಬರದೇ ಇದ್ದಾಗ ಸಾರ್ವಜನಿಕರು ಹಾಗೂ ಸಂಬಂಧಿಕರು ರೊಚ್ಚಿಗೆದ್ದು, ವೈದ್ಯರಿಗೆ ಫೋನಾಯಿಸಿದರು. ಆವಾಗ ಆಸ್ಪತ್ರೆಗೆ ಆಗಮಿಸಿದ ವೈದ್ಯರು, ಆಗಲೂ ಶವಪರೀಕ್ಷೆ ಮಾಡದೇ ಮೀನಮೇಷ ಎಣಿಸಿ, ನಾನು ರಾತ್ರಿ ಪಾಳೆಯಲ್ಲಿದ್ದೇನೆ, ಹಗಲು ವೇಳೆಯಲ್ಲಿ ನಾನಿಲ್ಲ ಎಂದು ಹಾರಿಕೆ ಉತ್ತರ ನೀಡಿ ತಮ್ಮ ಕೊಠಡಿ ಯಲ್ಲಿ ಹೋಗಿ ಕುಳಿತರು. ಅಲ್ಲಿ ಬಂದ ರೋಗಿಗಳನ್ನು ಪರೀಕ್ಷಿಸ ತೊಡಗಿದರು ಎಂದು ಸಾರ್ವಜನಿಕರು ದೂರಿದ್ದಾರೆ.

ವೈದ್ಯಾಧಿಕಾರಿಯ ವರ್ತನೆಯಿಂದ  ಕುಪಿತಗೊಂಡ ಸಾರ್ವಜನಿಕರು ವೈದ್ಯಾಧಿಕಾರಿ ಕುರಿ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡು ಎಳೆ ದಾಡಿದ್ದಾರೆ ಎನ್ನಲಾಗಿದೆ. ನಂತರ ಬೇರೊಬ್ಬ ವೈದ್ಯ ಡಾ. ಗೋವಿಂದ ರಾಜು ಬಂದು ಶವಪರೀಕ್ಷೆ ನಡೆಸಿದರು. 
ವೈದ್ಯಾಧಿಕಾರಿಯಿಂದ ಪ್ರಕರಣ ದಾಖಲು: ಕರ್ತವ್ಯಕ್ಕೆ ಅಡ್ಡಿಪಡಿಸಿ ನನ್ನ ಮೇಲೆ ಹಲ್ಲೆ ನಡೆಸಿ, ಆಸ್ಪತ್ರೆಯಲ್ಲಿದ್ದ ಕೆಲವು ಉಪಕರಣಗಳನ್ನು ಧ್ವಂಸ ಮಾಡಿದ್ದಾಂರೆಂದು ಆರೋಪಿಸಿದ ಡಾ ಕುರಿ ನಿಡಗುಂದಿಯ ಪೊಲೀಸ್ ಠಾಣೆಯಲ್ಲಿ ಐವರ ವಿರುದ್ಧ ಪ್ರಕರಣ ದಾಖಲು ಮಾಡಿದ್ದಾರೆ.

ನಿಯೋಜನೆ ಮೇಲೆ ಕಳೆದ ಎರಡು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಡಾ. ಕುರಿ ಸಾರ್ವಜನಿಕರೊಂದಿಗೆ ಅನುಚಿತ ವರ್ತನೆ, ಬೇಜವಾಬ್ದಾರಿ ಉತ್ತರ, ಕರ್ತವ್ಯದಲ್ಲಿ ನಿರ್ಲಕ್ಷ್ಯ, ಬಡರೋಗಿಗಳೊಂದಿಗೆ ಮಾನವೀಯ ನೆಲೆಗಟ್ಟಿನಲ್ಲಿ ಸೇವೆ ಸಲ್ಲಿಸುವುದಿಲ್ಲ ಎನ್ನುವ ಗಂಭಿರ ಆರೋಪಗಳು ಈ ವೈದ್ಯರ ಮೇಲಿವೆ. ಅನೇಕ ಬಾರಿ ಆರೋಗ್ಯ ಹಿರಿಯ ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಗಮನಕ್ಕೆ ತರ ಲಾಗಿದ್ದರೂ ಸಂಬಂಧಿಸಿದವರು ಇವ ರನ್ನು ಇಲ್ಲಿಂದ ಬಿಡುಗಡೆ ಗೊಳಿಸಿಲ್ಲ, ಆದ್ದರಿಂದ ಈಗಲಾದ್ರು ಅವರನ್ನು ಬಿಡುಗಡೆಗೊಳಿಸಿ, ಉತ್ತಮ ವೈದ್ಯಾಧಿ ಕಾರಿಯನ್ನು ಇಲ್ಲಿ ನಿಯೋಜನೆಗೊಳಿಸ ಬೇಕು, ಇಲ್ಲದಿದ್ದರೇ ನಾಳೆಯಿಂದಲೇ ಆಸ್ಪತ್ರೆ ಎದುರು ಪ್ರತಿಭಟನೆ ನಡೆಸು ತ್ತೇವೆ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ಮುಖಂಡರು ಹಾಗೂ ಸಾರ್ವಜನಿಕರು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT