ಶಿವಮೊಗ್ಗ: ನಗರದ ಮೆಗ್ಗಾನ್ ಬೋಧನಾ ಜಿಲ್ಲಾ ಆಸ್ಪತ್ರೆಯಲ್ಲಿ ಶುಕ್ರವಾರ ಅಪರೂಪದ ಶಸ್ತ್ರಚಿಕಿತ್ಸೆ ನಡೆದಿದೆ.
ವೃದ್ಧೆಯೊಬ್ಬರ ಕಿವಿ ಕೆಳಗಿದ್ದ ಸುಮಾರು ಎರಡು ಕೆ.ಜಿ. ತೂಕದ ಗೆಡ್ಡೆಯನ್ನು ಆಸ್ಪತ್ರೆ ಶಸ್ತ್ರಚಿಕಿತ್ಸಾ ವಿಭಾಗದ ವೈದ್ಯರ ತಂಡ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿ ಹೊರತೆಗೆದಿದ್ದಾರೆ.ಕೆನ್ನೆಯ ಎಡಭಾಗದಲ್ಲಿರುವ ಪೆರೊಟಿಡ್ ಗ್ರಂಥಿ (ಜೊಲ್ಲು ಸುರಿಸುವ ಗ್ರಂಥಿ)ಯ ಬಾಹು ಇದ್ದಾಗಿದ್ದು, 6 ಜನ ವೈದ್ಯರ ತಂಡ ಸುಮಾರು 2ಗಂಟೆಗಳ ಕಾಲ ಶಸ್ತ್ರಚಿಕಿತ್ಸೆ ನಡೆಸಿ, ಗೆಡ್ಡೆಯನ್ನು ಹೊರ ತೆಗೆದಿದ್ದಾರೆ.
ನಗರದ ಬೊಮ್ಮನಕಟ್ಟೆಯ ಹುಲಿಗೆಮ್ಮ (70) ಕಳೆದ 20 ವರ್ಷಗಳಿಂದ ಈ ಸಮಸ್ಯೆಯಿಂದ ಬಳಲುತ್ತಿದ್ದರು. ಒಂದೂವರೆ ತಿಂಗಳ ಹಿಂದೆ ಆಸ್ಪತ್ರೆಗೆ ದಾಖಲು ಮಾಡಿಸಿ, ನಿರಂತರ ರಕ್ತ ಪೂರೈಕೆ ಮಾಡುವುದರ ಜತೆಗೆ ಇತರೆ ಚಿಕಿತ್ಸೆ ನೀಡಿ, ಶುಕ್ರವಾರ ಅವರನ್ನು ಶಸ್ತ್ರಚಿಕಿತ್ಸೆಗೆ ಒಳಪಡಿಸಲಾಯಿತು ಎಂದು ವೈದ್ಯರ ತಂಡದ ಮುಖ್ಯಸ್ಥ ಡಾ.ನಾಗರಾಜ್ ಮಾಹಿತಿ ನೀಡಿದರು. ಸಾಮಾನ್ಯವಾಗಿ ಈ ಪ್ರಮಾಣದ ಗೆಡ್ಡೆಗಳಾದಲ್ಲಿ ಕ್ಯಾನ್ಸರ್ಗೆ ತುತ್ತಾಗುವ ಅವಕಾಶ ಹೆಚ್ಚಿರುತ್ತದೆ. ಆದರೆ, ಹುಲಿಗೆಮ್ಮ ಅವರಿಗೆ ಕ್ಯಾನ್ಸರ್ ವೈರಾಣುಗಳು ತಗು ಲಿಲ್ಲ. ಹಾಗಾಗಿ ಶಸ್ತ್ರಚಿಕಿತ್ಸೆ ಸ್ವಲ್ಪ ಸುಲಭವಾಯಿತು ಎಂದರು.
ಶಸ್ತ್ರಚಿಕಿತ್ಸೆಯ ತಂಡದಲ್ಲಿ ಡಾ.ನಾಗರಾಜ್ ಜತೆ ಡಾ.ಆರ್. ಎನ್. ರಾಯ್ಕರ್, ಡಾ.ರಾಜಲಕ್ಷ್ಮೀ, ಡಾ.ಚಂದ್ರಶೇಖರಪ್ಪ, ಡಾ.ರವೀಂದ್ರ, ಡಾ.ಕುಮಾರ್ ಇದ್ದರು.