ಕಠ್ಮಂಡು (ಐಎಎನ್ಎಸ್): ನೇಪಾಳದ ಸೈನ್ಯಕ್ಕೆ ಮಾರಕಾಸ್ತ್ರಗಳ ಪೂರೈಕೆಯನ್ನು ಭಾರತ ಪುನರಾರಂಭಿಸಿದೆ ಎಂಬ ಮಾಧ್ಯಮಗಳ ವರದಿಯನ್ನು ಭಾರತ ನಿರಾಕರಿಸಿರುವ ನಡುವೆಯೂ ಅಲ್ಲಿನ ಮಾವೋವಾದಿ ವಿರೋಧಪಕ್ಷ ಭಾರತದ ಶಸ್ತ್ರಾಸ್ತ್ರ ಪೂರೈಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.
ಮಾವೋವಾದಿ ಮುಖಂಡ ಪುಷ್ಪ ಕಮಾಲ್ ದಹಾಲ್ ಪ್ರಚಂಡ ಅವರು ಮಂಗಳವಾರ ನೇಪಾಳದ ಪ್ರಧಾನಿ ಅವರನ್ನು ಭೇಟಿ ಮಾಡಿ ಮಾಧ್ಯಮಗಳ ವರದಿಯತ್ತ ಅವರ ಗಮನ ಸೆಳೆದರು. ಜೊತೆಗೆ ಭಾರತದ ಕ್ರಮವು 2006ರ ಶಾಂತಿ ಒಪ್ಪಂದ ಉಲ್ಲಂಘನೆಯಾಗಿದೆ ಎಂದರು.
ಆದರೆ 2005ರಿಂದ ನೇಪಾಳದ ಸೈನ್ಯಕ್ಕೆ ಮಾರಕಾಸ್ತ್ರಗಳನ್ನು ಸರಬರಾಜು ಮಾಡಿಲ್ಲ ಎಂದು ಭಾರತ ಸೋಮವಾರ ಹೇಳಿದೆ. ‘ನೇಪಾಳದ ಶಾಂತಿ ಪ್ರಕ್ರಿಯೆಯಿಂದ ವಿಶ್ವಸಂಸ್ಥೆ ಹೊರಬಂದ ಕೆಲವೇ ಕ್ಷಣಗಳಲ್ಲಿ ಭಾರತ ಶಸ್ತ್ರಾಸ್ತ್ರಗಳನ್ನು ಸರಬರಾಜು ಮಾಡಲು ಆರಂಭಿಸಿತ್ತು’ ಎಂದು ‘ಜನಾದಿಶಾ’ ಪತ್ರಿಕೆ ವರದಿ ಮಾಡಿದೆ.