ವಿರಾಜಪೇಟೆ: ‘ಧರ್ಮ, ಜಾತಿ ಭಾಷೆಯ ಹೆಸರಿನಲ್ಲಿ ಶಾಂತಿ ನೆಮ್ಮದಿ ಕದಡುವುದರೊಂದಿಗೆ ಸಮಾಜವನ್ನು ಒಡೆಯುವವರ ವಿರುದ್ಧ ಜಾಗೃತಿ ಅಗತ್ಯ’ ಎಂದು ಸಾಹಿತಿ ಹಾಗೂ ಆಕಾಶವಾಣಿ ಕಾರ್ಯಕ್ರಮ ನಿರ್ವಾಹ ಕರೂ ಆಗಿರುವ ಅಬ್ದುಲ್ ರಷೀದ್ ಅಭಿಪ್ರಾಯಪಟ್ಟರು. ವಿರಾಜಪೇಟೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವತಿಯಿಂದ ಇಲ್ಲಿನ ಮಹಿಳಾ ಸಮಾಜದಲ್ಲಿ ಮಂಗಳವಾರ ಏರ್ಪಡಿಸಿದ್ದ ಕಾಲೇಜಿನ ಕ್ರೀಡಾ ಮತ್ತು ಸಾಂಸ್ಕೃತಿಕ ಸಮಿತಿ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
‘ಜಾಗತೀಕರಣದ ಇಂದಿನ ದಿನಗಳಲ್ಲಿ ನಾವು ಸ್ವಂತಿಕೆಯನ್ನು ಕಳೆದುಕೊಳ್ಳುತ್ತಿದ್ದೇವೆ. ಸಮಾಜವನ್ನು ನೈತಿಕ ಸ್ಥೈರ್ಯದ ಮೂಲಕ ತಿದ್ದುವ ಪ್ರವೃತ್ತಿ ವಿದ್ಯಾರ್ಥಿಗಳು ಹಾಗೂ ಯುವ ಜನತೆ ಮಾಡಬೇಕಿದೆ. ವಿದ್ಯಾರ್ಥಿ ಜೀವನದಿಂದಲೇ ಈ ಕೆಲಸ ಆರಂಭವಾಗಬೇಕು. ಶಾಂತಿ, ಸದೃಢ ಸಮಾಜಕ್ಕೆ ಪ್ರತಿಯೊಬ್ಬರೂ ಪ್ರಯತ್ನಿಸಬೇಕು’ ಎಂದರು ಪತ್ರಿಕೋದ್ಯಮಿ ಜಿ.ಚಿದ್ವಿಲಾಸ್ ಮಾತನಾಡಿದರು. ಕಾವೇರಿ ಆಶ್ರಮದ ವಿವೇಕಾನಂದ ಶರಣ ಸ್ವಾಮಿ ಸಮಾರೋಪ ಭಾಷಣ ಮಾಡಿದರು. ಪ್ರಾಂಶುಪಾಲ ಪ್ರೊ. ನಟರಾಜ್ ಅಧ್ಯಕ್ಷತೆ ವಹಿಸಿದ್ದರು.‘ಕೊಡಗಿನ ಗೌರಮ್ಮ’ ಪ್ರಶಸ್ತಿ ಪುರಸ್ಕೃತ ಡಾ.ಕೆ. ಸರಸ್ವತಿ ಅವರನ್ನು ಸನ್ಮಾನಿಸ ಲಾಯಿತು. ಸಮಿತಿ ಉಪಾಧ್ಯಕ್ಷ ದಿಲನ್, ರಾಕಿ ಪೂವಣ್ಣ, ಕೆ.ಟಿ. ಬೋಪಯ್ಯ ಸೌಮ್ಯ ಇದ್ದರು.