ಚನ್ನಗಿರಿ: ಜನರು ದೇವರ ಬಗ್ಗೆ ಇತ್ತೀಚಿನ ದಿನಗಳಲ್ಲಿ ಹೆಚ್ಚು ಆಸಕ್ತಿಯನ್ನು ಬೆಳೆಸಿಕೊಂಡಿದ್ದಾರೆ. ಇದಕ್ಕೆ ಹೆಚ್ಚು ಹೆಚ್ಚು ದೇವಾಲಯಗಳು ನಿರ್ಮಾಣವಾಗುತ್ತಿರುವುದೇ ಸಾಕ್ಷಿ. ದೇವಾಲಯ ನೊಂದ ಜನರಿಗೆ ಶಾಂತಿ, ನೆಮ್ಮದಿ ನೀಡುವ ತಾಣಗಳಾಗಿವೆ ಎಂದು ಸಂಸದ ಜಿ.ಎಂ. ಸಿದ್ದೇಶ್ವರ್ ಹೇಳಿದರು.ಸೋಮವಾರ ತಾಲ್ಲೂಕಿನ ಹೊನ್ನೆಮರದಹಳ್ಳಿ ಗ್ರಾಮದಲ್ಲಿ ನಡೆದ ಪಾರ್ವತಮ್ಮ ದೇವಾಲಯ ಮತ್ತು ನೂತನ ಗೋಪುರ ಕಳಸಾರೋಹಣ ಹಾಗೂ ಜನಜಾಗೃತಿ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ದೇವಸ್ಥಾನಗಳನ್ನು ಕಟ್ಟುವುದು ಸುಲಭ. ಆದರೆ, ಮುಂದೆ ಅವುಗಳನ್ನು ಮೇಲ್ವಿಚಾರಣೆ ಮಾಡುವುದು ತುಂಬಾ ಕಷ್ಟ. ದೇವಾಲಯದ ಆವರಣಗಳಲ್ಲಿ ಸ್ವಚ್ಛತೆಗೆ ಹೆಚ್ಚು ಆದ್ಯತೆಯನ್ನು ನೀಡಬೇಕು. ದೇವಾಲಯದ ಜಗುಲಿಗಳು ಜೂಜಾಟದ ಅಡ್ಡೆಯಾಗಬಾರದು. ಕಷ್ಟ ಬಂದಾಗ ವೆಂಕಟರಮಣ ಎನ್ನುವುದನ್ನು ಬಿಟ್ಟು ಪ್ರತಿ ದಿನವೂ ದೇವಾಲಯಗಳಿಗೆ ಭೇಟಿ ನೀಡಿದರೆ ಉತ್ತಮ ಎಂದರು.
ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಮಾತನಾಡಿ, ನಂಬಿಕೆಗಿಂತ ದೊಡ್ಡದು ಯಾವುದೂ ಇಲ್ಲ. ಸ್ವಂತ ಆಸ್ತಿಯನ್ನು ರಕ್ಷಿಸಿದಂತೆ ದೇವಾಲಯದ ಆಸ್ತಿಯನ್ನು ರಕ್ಷಿಸಬೇಕು. ಈ ಗ್ರಾಮದ ಹಿರೇಹಳ್ಳಕ್ಕೆ ಚೆಕ್ ಡ್ಯಾಂ ನಿರ್ಮಿಸಲು ` 50 ಲಕ್ಷ ಹಾಗೂ ಚಿಕ್ಕಗಂಗೂರು ಬಳಿ ಈ ಹಳ್ಳದ ಆಳ ಮತ್ತು ಅಗಲೀಕರಣ ಕಾಮಗಾರಿಗೆ ` 50 ಲಕ್ಷ ಅನುದಾನವನ್ನು ಮಂಜೂರು ಮಾಡಲಾಗಿದೆ. ಹಳ್ಳದ ಏರಿಗಳನ್ನು ರೈತರು ಹಾಳು ಮಾಡಬಾರದು ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕರಾದ ವಡ್ನಾಳ್ ರಾಜಣ್ಣ, ಮಹಿಮ ಪಟೇಲ್, ತಾ.ಪಂ. ಸದಸ್ಯೆ ನಾಗರತ್ನಮ್ಮ, ಮಾಜಿ ಸದಸ್ಯ ಮಹೇಶ್ವರಪ್ಪ, ಗ್ರಾ.ಪಂ. ಸದಸ್ಯೆ ಪುಟ್ಟಮ್ಮ ಮುಂತಾದವರು ಉಪಸ್ಥಿತರಿದ್ದರು. ಹರೋನಹಳ್ಳಿ ಸ್ವಾಮಿ ಉಪನ್ಯಾಸ ನೀಡಿದರು.ಬಿಳಕಿ ಮಠದ ರಾಚೋಟೇಶ್ವರ ಶಿವಾಚಾರ್ಯ ಸ್ವಾಮೀಜಿ ಹಾಗೂ ಪಾಂಡೋಮಟ್ಟಿ ವಿರಕ್ತ ಮಠದ ಗುರುಬಸವ ಸ್ವಾಮೀಜಿ ನೇತೃತ್ವ ವಹಿಸಿ ಆಶೀರ್ವಚನ ನೀಡಿದರು. ಮರುಳಸಿದ್ದೇಶ್ವರ ಟ್ರಸ್ಟ್ ಅಧ್ಯಕ್ಷ ಕೆ. ಶಿವಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ದೀಪಾ ಪ್ರಾರ್ಥಿಸಿದರು. ಎಂ. ರಾಜಪ್ಪ ಸ್ವಾಗತಿಸಿದರು.