ಚಿಕ್ಕಮಗಳೂರು: ‘ನಾವು ನಗರಸಭೆಯಿಂದ ಗೋಹತ್ಯಾ ಕೇಂದ್ರಗಳ ಬಗ್ಗೆ ಮಾಹಿತಿ ಪಡೆದು ನೀಡಿದ್ದರೂ ಪೊಲೀಸರು ಕ್ರಮ ವಹಿಸುವುದಿಲ್ಲ. ರಕ್ಷಣೆ ಕೊಡಿ ಎಂದರೆ ಮೀನಾಮೇಷ ಎಣಿಸುತ್ತಾರೆ. ಗೋಮಾಂಸ ವ್ಯಾಪಾರಿಗಳು ‘ಮಾಮೂಲಿ’ ಕೊಡುತ್ತೇವೆ ಎಂದು ರಾಜಾರೋಷವಾಗಿ ವ್ಯಾಪಾರ ಮಾಡುತ್ತಿದ್ದಾರೆ’...
-ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಯಲ್ಲಿ ಮಂಗಳವಾರ ನಡೆದ ಶಾಂತಿ ಸಭೆಯಲ್ಲಿ ಮಾತನಾಡಿದ ನಗರಸಭೆ ಸದಸ್ಯ ಮತ್ತು ಬಿಜೆಪಿ ಮುಖಂಡ ಪ್ರೇಮ್ ಕುಮಾರ್ ನಗರ ಪೊಲೀಸ್ ಠಾಣೆಯ ಅಧಿಕಾರಿಗಳ ಮೇಲೆ ಹರಿಹಾಯ್ದ ರೀತಿ ಇದು.
‘ನಾವು ದೂರು ನೀಡಿದಾಗಲೇ ಪೊಲೀಸರು ಕಾರ್ಯಪ್ರವೃತ್ತರಾಗಿದ್ದರೆ ಕ್ರಮ ಕಸಾಯಿಖಾನೆಗಳೇ ಇರುತ್ತಿರಲಿಲ್ಲ. ಬಜರಂಗ ದಳ ಕಾರ್ಯಕರ್ತರು ಕಾನೂನು ಕೈಗೆತ್ತಿಕೊಳ್ಳುವ ಪರಿಸ್ಥಿತಿಯೂ ನಿರ್ಮಾಣವಾಗುತ್ತಿರಲಿಲ್ಲ’ ಎಂದು ಪ್ರತಿಪಾದಿಸಿದರು.
‘ಪೊಲೀಸರು ಸ್ಪಂದಿಸಿಲ್ಲವೆಂದು ಕಾನೂನು ಕೈಗೆತ್ತಿಕೊಳ್ಳುವುದನ್ನು ಸಹಿಸಲು ಸಾಧ್ಯವಿಲ್ಲ. ಸ್ಥಳೀಯ ಅಧಿಕಾರಿಗಳು ದೂರು ಸ್ವೀಕರಿಸಲು ನಿರಾಕರಿಸಿದರೆ ನೇರವಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಥವಾ ನನಗೇ ಮಾಹಿತಿ ನೀಡಿ’ ಎಂದು ಜಿಲ್ಲಾಧಿಕಾರಿ ಚನ್ನಪ್ಪಗೌಡ ಹೇಳಿದರು.
ಎರಡೂ ಸಮುದಾಯದ ಗಣ್ಯರನ್ನೊಳಗೊಂಡ ತಂಡ ರಚಿಸಿ ಅಕ್ರಮ ಮಾಂಸದಂಗಡಿಗಳ ವಿರುದ್ಧ ಕಾರ್ಯಾಚಾರಣೆ ನಡೆಸಲಾಗುವುದು’ ಎಂದು ಭರವಸೆ ನೀಡಿದರು.