ದಾವಣಗೆರೆ: ‘ತೋಟಗಾರಿಕೆ ಹಾಗೂ ಕೃಷಿ ಉತ್ನನ್ನ ಮಾರುಕಟ್ಟೆ ಸಮಿತಿ ಸಚಿವ ಶಾಮನೂರು ಶಿವಶಂಕರಪ್ಪ ಮುಖ್ಯಮಂತ್ರಿಯಾದರೆ ನಾನು ಪಕ್ಷ ತೊರೆದು ಅವರೊಂದಿಗೆ ಬರುತ್ತೇನೆ’ ಎಂದು ಜೆಡಿಎಸ್ ಶಾಸಕ ಎಚ್.ಎಸ್.ಶಿವಶಂಕರ್ ಅಚ್ಚರಿಯ ಹೇಳಿಕೆ ನೀಡಿದರು.
ಸಾಧು ಸದ್ಧರ್ಮ ವೀರಶೈವ ಸಂಘ ನಗರದಲ್ಲಿ ಶನಿವಾರ ಸಚಿವ ಶಾಮನೂರು ಶಿವಶಂಕರಪ್ಪ ಅವರಿಗೆ ಏರ್ಪಡಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.
‘ಜೆ.ಎಚ್.ಪಟೇಲರ ನಂತರ ಮಧ್ಯ ಕರ್ನಾಟಕದಿಂದ ಯಾರೂ ಮುಖ್ಯಮಂತ್ರಿಯಾಗಿಲ್ಲ. ಈ ಭಾಗದಿಂದ ಮುಖ್ಯಮಂತ್ರಿಯಾಗಬಲ್ಲ ನಾಯಕನಿದ್ದರೆ ಅವರು ಶಾಮನೂರು ಶಿವ-ಶಂಕರಪ್ಪ ಮಾತ್ರ. ಮೃದು ಧೋರಣೆಯ ಸ್ವಭಾವ ಬಿಟ್ಟು ಹೋರಾಟ ಮಾಡಿದರೆ ಮುಖ್ಯಮಂತ್ರಿಯಾಗುವ ಶಕ್ತಿ ಅವರಿಗಿದೆ’ ಎಂದು ಜಿಲ್ಲೆಯ ಏಕೈಕ ಜೆಡಿಎಸ್ ಶಾಸಕ ಶಿವಶಂಕರ್ ಹೇಳಿದರು.
‘ನೀವು ಮುನ್ನಗ್ಗಿ, ನಾನು ಜೊತೆಗೆ ಬರುತ್ತೇನೆ. ನಾನೂ ನಿಮ್ಮ ಪುತ್ರನಿದ್ದಂತೆ. ನಿಮ್ಮ ಪುತ್ರ– ಶಾಸಕ ಎಸ್.ಎಸ್.ಮಲ್ಲಿಕಾರ್ಜುನ್ ಜೋಡೆತ್ತಿನಂತೆ. ಜಿಲ್ಲೆಯ ಅಭಿವೃದ್ಧಿಗಾಗಿ ಶ್ರಮಿಸುತ್ತೇವೆ. ನಿಮ್ಮೊಂದಿಗೆ ಸದಾ ಕೈಜೋಡಿಸುತ್ತೇವೆ’ ಎಂದು ವೇದಿಕೆಯಲ್ಲಿದ್ದ ಶಿವಶಂಕರಪ್ಪ ಅವರಿಗೆ ತಿಳಿಸಿದರು.
ಇದಕ್ಕೂ ಮುನ್ನ ಮಾತನಾಡಿದ ಚನ್ನಗಿರಿ ಶಾಸಕ ವಡ್ನಾಳ್ ರಾಜಣ್ಣ, ‘ಶಿವಶಂಕರಪ್ಪ ಅವರಿಗೆ ಎಲ್ಲವೂ ಸಿಕ್ಕಿದೆ. ನನಗೆ ಮುಖ್ಯಮಂತ್ರಿಯಾಗಿ ಅವರನ್ನು ನೋಡಬೇಕು ಅನ್ನೋ ಕನಸಿದೆ. ಅದಕ್ಕೆಲ್ಲ ಬಹಳಷ್ಟು ಅವಕಾಶವೂ ಇದೆ’ ಎಂದರು.
‘ಶಾಮನೂರು ಶಿವಶಂಕರಪ್ಪ ಅವರು 15–20 ವರ್ಷದ ಹಿಂದೆಯೇ ಸಚಿವ ಹಾಗೂ ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷರಾಗಬೇಕಿತ್ತು. ಆಗ ಸಮಾಜ ಇನ್ನಷ್ಟು ಅಭಿವೃದ್ಧಿ ಸಾಧಿಸುತ್ತಿತ್ತು’ ಎಂದು ಹೊನ್ನಾಳಿ ಶಾಸಕ ಡಿ.ಜಿ.ಶಾಂತನಗೌಡ ನುಡಿದರು.