ಗೋಣಿಕೊಪ್ಪಲು: ಪೊನ್ನಂಪೇಟೆ ರಾಮಕೃಷ್ಣ ಶಾರದಾಶ್ರಮದ ಆಸ್ಪತ್ರೆಯಲ್ಲಿ ಅತ್ಯಾಧುನಿಕ ತಂತ್ರಜ್ಞಾನದ ಟಿಟಿ-ಇಸಿಜಿ ಯಂತ್ರವನ್ನು ಸ್ವಾಮಿ ಅಕ್ಷರನಾತ್ಮನಂದಜಿ ಶನಿವಾರ ಸಾರ್ವಜನಿಕ ಸೇವೆಗೆ ಅರ್ಪಿಸಿದರು.
1942ರಲ್ಲಿ ಹೋಮಿಯೋಪತಿ ಕ್ಲಿನಿಕ್ ಆಗಿ ಆರಂಭಗೊಂಡ ಈ ಆಸ್ಪತ್ರೆಯು ಸಾರ್ವಜನಿಕರು, ದಾನಿಗಳು ಹಾಗೂ ಭಕ್ತರ ಮೂಲಕ ಈಗ ಬೃಹದಾಕಾರವಾಗಿ ಬೆಳೆದಿದೆ. ಇದೀಗ ಟಿಟಿ-ಇಸಿಜಿ ಯಂತ್ರ ಸೇರ್ಪಡೆಯಾಗಿದೆ. ಸುತ್ತಮುತ್ತಲಿನ ಜನತೆಗೆ ಮತ್ತಷ್ಟು ಸೌಲಭ್ಯ ಒದಗಿಸಲು ಶ್ರಮಿಸಲಾಗುವುದು ಎಂದು ಸ್ವಾಮೀಜಿ ಹೇಳಿದರು.
ಆಶ್ರಮದ ಅಧ್ಯಕ್ಷ ಬೋಧಸ್ವರೂಪನಂದಜಿ ಮಾತನಾಡಿ ಇಸಿಜಿ ಮೂಲಕ ಹೃದ್ರೋಗಿಗಳನ್ನು ಪರೀಕ್ಷಿಸಿ ಇಂಟರ್ನೆಟ್ನಲ್ಲಿ ಬೆಂಗಳೂರಿನ ನಾರಾಯಣ ಹೃದಯಾಲಯಕ್ಕೆ ಕಳಿಸಿಕೊಡಲಾಗುವುದು. ಅಲ್ಲಿಯ ತಜ್ಞ ವೈದ್ಯರು ಪರೀಕ್ಷಿಸಿ ವರದಿ ನೀಡಿದ ಬಳಿಕ ಚಿಕಿತ್ಸೆ ನೀಡಲಾಗುವುದು.
ಇದರಿಂದ ಅತಿಯಾದ ವೆಚ್ಚ, ವೈದ್ಯರಿಗಾಗಿ ಅಲೆಯುವುದು ಮತ್ತು ಕಾಯುವುದು ತಪ್ಪಲಿದೆ. ಜನತೆಯ ಸೇವೆಯೆ ಆಶ್ರಮದ ಗುರಿಯಾಗಿದ್ದು, ಇದರ ಪ್ರಯೋಜನವನ್ನು ಪಡೆದುಕೊಳ್ಳಬೇಕು ಎಂದು ಸಲಹೆ ಮಾಡಿದರು.
ಗೋಣಿಕೊಪ್ಪಲು ಲಯನ್ಸ್ ಕ್ಲಬ್ ಅಧ್ಯಕ್ಷ ಡಾ.ಸುಬ್ಬಯ್ಯ ಮಾತನಾಡಿದರು.