ಹರಪನಹಳ್ಳಿ: ಗಾಳಿಯ ರಭಸಕ್ಕೆ ವಿದ್ಯುತ್ ಪೂರೈಕೆ ಮಾರ್ಗದಲ್ಲಿನ ತಂತಿಗಳ ಸ್ಪರ್ಶದಿಂದ ಕಾಣಿಸಿಕೊಂಡ ಬೆಂಕಿಯಿಂದಾಗಿ ಕಬ್ಬಿನಗದ್ದೆ ಸುಟ್ಟು ಭಸ್ಮವಾದ ಘಟನೆ ತಾಲ್ಲೂಕಿನ ಅಳಗಂಚಿಕೆರೆ ಗ್ರಾಮದಲ್ಲಿ ಸೋಮವಾರ ನಡೆದಿದೆ.
ಗ್ರಾಮದ ಇಟ್ಟಿಗುಡಿ ಶಾಂತವೀರಪ್ಪ ಅವರಿಗೆ ಸೇರಿದ ಗದ್ದೆಯ 2ಎಕರೆ ವಿಸ್ತೀರ್ಣದಲ್ಲಿ ಹುಲುಸಾಗಿ ಬೆಳೆದುನಿಂತು, ಕಟಾವಿನ ಹಂತದಲ್ಲಿದ್ದ ಕಬ್ಬಿನ ಬೆಳೆ ಬೆಂಕಿಯ ಜ್ವಾಲೆಯಲ್ಲಿ ಸಂಪೂರ್ಣ ಭಸ್ಮವಾಗಿದೆ. ತೆಲಿಗಿ ವಿದ್ಯುತ್ ಪ್ರಸರಣಾ ಕೇಂದ್ರದಿಂದ ಅಳಗಂಚಿಕೆರೆ ಸೇರಿದಂತೆ ಸುತ್ತಲಿನ ಗ್ರಾಮಗಳಿಗೆ ಪೂರೈಕೆಯಾಗುವ ವಿದ್ಯುತ್ ಮಾರ್ಗದಲ್ಲಿನ ತಂತಿಗಳ ಸ್ಪರ್ಶದಿಂದಾಗಿ ಬೆಂಕಿ ಕಾಣಿಸಿಕೊಂಡಿದೆ. 1ಟನ್ಗೂ ಅಧಿಕ ಕಬ್ಬು ಬೆಂಕಿಗೆ ಆಹುತಿಯಾಗಿದೆ. ಇದರಿಂದಾಗಿರೂ1ಲಕ್ಷಕ್ಕೂ ಅಧಿಕ ಹಾನಿ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.
ಮೆಕ್ಕೆಜೋಳ ತೆನೆಗೆ ಬೆಂಕಿ: ಆಕಸ್ಮಿಕ ಬೆಂಕಿಯ ಪರಿಣಾಮ ನಾಲ್ಕು ಮುಕ್ಕಾಲು ಎಕರೆ ಜಮೀನಿನಲ್ಲಿ ಬೆಳೆದು, ಕಟಾವ್ಮಾಡಿ ಸಂಗ್ರಹಿಸಿಟ್ಟಿದ್ದ ಕಾಳುಸಹಿತ ಮೆಕ್ಕೆಜೋಳದ ತೆನೆ ಸುಟ್ಟು ಕರಕಲಾದ ಘಟನೆ ತಾಲ್ಲೂಕಿನ ಶೃಂಗಾರತೋಟ ಗ್ರಾಮದಲ್ಲಿ ಸೋಮವಾರ ಮಧ್ಯಾಹ್ನ ನಡೆದಿದೆ.
ಗ್ರಾಮದ ಕೆ. ಮುರಾರಿ ಎಂಬುವವರಿಗೆ ಸೇರಿದ ನೀರಾವರಿ ಜಮೀನಿನಲ್ಲಿ ನಾಲ್ಕುಮುಕ್ಕಾಲು ಎಕರೆ ವಿಸ್ತೀರ್ಣದಲ್ಲಿ ಮೆಕ್ಕೆಜೋಳದ ಬೆಳೆಯನ್ನು ಬೆಳೆದಿದ್ದರು. ಕಟಾವ್ಮಾಡಿ ಕಣಕ್ಕೆ ಸಾಗಿಸಲು ಒಂದೆಡೆ ಸಂಗ್ರಹಿಸಿಟ್ಟಿದ್ದ ತೆನೆಗೆ ಆಕ್ಮಸಿಕವಾಗಿ ಬೆಂಕಿ ಬಿದ್ದಿದೆ. ಹೀಗಾಗಿ ಸಂಗ್ರಹಿಸಿಟ್ಟಿದ್ದ ಸುಮಾರು 80 ಕ್ವಿಂಟಲ್ನಷ್ಟು ಮೆಕ್ಕೆಜೋಳದ ತೆನೆ ಸುಟ್ಟುಹೋಗಿದೆ. ರೂ75ಸಾವಿರಕ್ಕೂ ಅಧಿಕ ಹಾನಿ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.
ಅಗ್ನಿ ಅನಾಹುತದಿಂದಾಗಿ ರೈತರು ಕಂಗಾಲಾಗಿದ್ದಾರೆ.
ಹಲುವಾಗಲು ಹಾಗೂ ಹರಪನಹಳ್ಳಿ ಠಾಣೆಗಳಲ್ಲಿ ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.
ಬೆಂಕಿಗೆ ಬಿದ್ದು ರೈತ ಸಾವು
ಹೊನ್ನಾಳಿ: ಮೆಕ್ಕೆಜೋಳದ ಹೊಲದಲ್ಲಿನ ಬೆಂಕಿಯಲ್ಲಿ ಬಿದ್ದು ರೈತನೊಬ್ಬ ಸಾವಿಗೀಡಾದ ದುರ್ಘಟನೆ ತಾಲ್ಲೂಕಿನ ಚೀ.ಕಡದಕಟ್ಟೆ ಗ್ರಾಮದಲ್ಲಿ ಸೋಮವಾರ ಸಂಜೆ ಸಂಭವಿಸಿದೆ.ಚೀ.ಕಡದಕಟ್ಟೆ ಗ್ರಾಮದ ಕೆ.ಪಿ. ಶಿವಪ್ಪ(45) ಸಾವಿಗೀಡಾದ ರೈತ.
ಕೆ.ಪಿ. ಶಿವಪ್ಪ ತನ್ನ ಹೊಲದಲ್ಲಿನ ಮೆಕ್ಕೆಜೋಳದ ತೆನೆ ಬಿಡಿಸಿದ ನಂತರ ಉಳಿದ ದಂಟಿಗೆ ಬೆಂಕಿ ಹಚ್ಚಿದ್ದಾನೆ. ಪೂರ್ತಿ ಹೊಲಕ್ಕೆ ವ್ಯಾಪಿಸಿದ ಬೆಂಕಿ ಪಕ್ಕದ ಹೊಲದಲ್ಲಿನ ಕಬ್ಬಿನ ಗದ್ದೆಗೆ ಹಬ್ಬಬಹುದು ಎಂಬ ಭೀತಿಯಿಂದ ನಂದಿಸಲು ತೆರಳಿದವೇಳೆ ಕಾಲುಜಾರಿ ಬೆಂಕಿಯಲ್ಲಿ ಬಿದ್ದಿದ್ದಾನೆ. ಮೈ, ಕೈ-ಕಾಲುಗಳಿಗೆ ತೀವ್ರವಾದ ಗಾಯಗಳಾಗಿದ್ದು, ಆತನನ್ನು ಚೀಲೂರಿನ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಆ ವೇಳೆಗೆ ಶಿವಪ್ಪ ಮೃತಪಟ್ಟಿದ್ದಾನೆ ಎಂದು ವೈದ್ಯರು ತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.