ಮೈಸೂರು: ರಾಘವೇಂದ್ರನಗರದಲ್ಲಿರುವ ಕೇಂದ್ರೀಯ ವಿದ್ಯಾಲಯ ಆವರಣದಲ್ಲಿ ಸೋಮವಾರ ಮಧ್ಯರಾತ್ರಿ ದಿಢೀರ್ ಪ್ರತ್ಯಕ್ಷವಾದ ಚಿರತೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ ಮತ್ತು ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಸೆರೆ ಹಿಡಿಯುವಲ್ಲಿ ಯಶಸ್ವಿಯಾದರು.
ಶಾಲಾ ಆವರಣದಲ್ಲಿ ರಾತ್ರಿ ಪಾಳಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ನಂಜಪ್ಪ ಅವರಿಗೆ ಮಧ್ಯರಾತ್ರಿ ಚಿರತೆ ಕಾಣಿಸಿಕೊಂಡಿತು. ಇದರಿಂದ ಗಾಬರಿಗೊಂಡ ನಂಜಪ್ಪ, ಪೊಲೀಸರು ಮತ್ತು ಅರಣ್ಯ ಇಲಾಖೆಗೆ ಸುದ್ದಿ ಮುಟ್ಟಿಸಿದರು.
ಸ್ಥಳಕ್ಕೆ ಬಂದ ಅರಣ್ಯ ಇಲಾಖೆ ಸಿಬ್ಬಂದಿ ಕಾಂಪೌಂಡ್ ಒಳಗೆ ಅಡಗಿ ಕುಳಿತ್ತಿದ್ದ ಚಿರತೆಗೆ ಬಲೆ ಬೀಸಿ ಸೆರೆ ಹಿಡಿಯಲು ಯತ್ನಿಸಿದರು. ಆದರೆ ಸಾಧ್ಯವಾಗಲಿಲ್ಲ. ಸಿಬ್ಬಂದಿಯ ಮೇಲೆ ಚಿರತೆ ಎರಗಲು ಮುಂದಾಯಿತು. ಇದನ್ನು ಅರಿತ ಸಿಬ್ಬಂದಿ ಅರಿವಳಿಕೆ ಚುಚ್ಚುಮದ್ದು ನೀಡಿ ಚಿರತೆಯನ್ನು ಸೆರೆ ಹಿಡಿದು, ಶ್ರೀಚಾಮರಾಜೇಂದ್ರ ಮೃಗಾಲಯದಲ್ಲಿ ಇರಿಸಲಾಗಿದೆ. ಬುಧವಾರ ಚಿರತೆಯನ್ನು ಕಾಡಿಗೆ ಬಿಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದರು.