ವಿಜಯಪುರ: ಪಟ್ಟಣದ ಜಿ.ಕೆ.ಬಿ.ಎಂ.ಎಸ್ ಶಾಲೆಯಲ್ಲಿ ನಿರ್ಮಾಣ ವಾಗುತ್ತಿರುವ ಶಾಲಾ ಕಟ್ಟಡದ ಮೂರು ಕೊಠಡಿಗಳ ಕಾಮಗಾರಿ ಕಳಪೆಯಾಗಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮಕ್ಕಳ ಶಿಕ್ಷಣ ಹಕ್ಕು ಕಾಯ್ದೆ ಅನುಸಾರ 2012-13ನೇ ಸಾಲಿನ ಸರ್ವಶಿಕ್ಷಣ ಅಭಿಯಾನ ಕಾರ್ಯಕ್ರಮದಡಿ ಈ ಶಾಲಾ ಕೊಠಡಿಗಳನ್ನು ನಿರ್ಮಿಸಲಾಗುತ್ತಿದೆ. ಇದಕ್ಕಾಗಿ ಮಾರ್ಗಸೂಚಿ ಮತ್ತು ಅಧಿಕಾರವನ್ನು ಶಾಲಾ ಎಸ್ಡಿಎಂಸಿ ಅಧ್ಯಕ್ಷರು ಮತ್ತು ಮೇಲುಸ್ತುವಾರಿ ಸಮಿತಿಗೆ ಕೊಟ್ಟಿದ್ದು ಈ ವಿಷಯದಲ್ಲಿ ಸಾರ್ವಜನಿಕರ ಕಣ್ಣಿಗೆ ಮಣ್ಣೆರೆಚಲಾಗಿದೆ ಎಂದು ಆರೋಪಿಸಿದ್ದಾರೆ.
ಅತ್ಯಂತ ಹಳೆಯ ಜಿ.ಕೆ.ಬಿ.ಎಂ.ಎಸ್. (ಸರ್ಕಾರಿ ಕನ್ನಡ ಬಾಲಕರ ಮಾದರಿ ಶಾಲೆ) ಶಾಲೆಯ 3 ಶಿಥಿಲಗೊಂಡ ಕೊಠಡಿಗಳ ಕೆಡವಿ ಹೊಸ ಕೊಠಡಿಗಳ್ನು ನಿರ್ಮಿಸಲು ಶಿಕ್ಷಣ ಇಲಾಖೆ ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿ ಆದೇಶಿಸಿದ್ದಾರೆ.
ಈ ಕೊಠಡಿಗಳ ನಿರ್ಮಾಣ ಕಾರ್ಯವನ್ನು ಆಯಾ ಶಾಲೆಯ ಶಾಲಾಭಿವೃದ್ಧಿ ಸಮಿತಿ ಹಾಗೂ ಮೇಲುಸ್ತುವಾರಿ ಸಮಿತಿಗಳಿಂದಲೇ ನಿರ್ವಹಿಸಿ, ಯಾವುದೇ ಏಜೆನ್ಸಿ ಅಥವಾ ಗುತ್ತಿಗರದಾರರಿಗೆ ವಹಿಸಬಾರದೆಂಬುದೂ ಸೇರಿದಂತೆ ಹಲವು ನಿಯಮಗಳನ್ನು ವಿಧಿಸಲಾಗಿದೆ. ಆದರೆ ಶಾಲಾಅಭಿವೃದ್ಧಿ ಮಂಡಳಿ ಇವುಗಳನ್ನೆಲ್ಲಾ ಗಾಳಿಗೆ ತೂರಿದೆ. ಶಾಲಾ ಎಸ್ಡಿಎಂಸಿ ಅಧ್ಯಕ್ಷರು ಹಾಗೂ ಮುಖ್ಯ ಶಿಕ್ಷಕರು ತಮ್ಮ ಈ ಅಧಿಕಾರವನ್ನು ತಾ. ಪಂ.ಅಧ್ಯಕ್ಷರಿಗೆ ವಹಿಸಿಕೊಟ್ಟಿರುವುದಾಗಿ ಹೇಳಿಕೆ ನೀಡುತ್ತ್ದ್ದಿದಾರೆ ಎಂದರು.
ಸಾರ್ವಜನಿಕರ ಆರೋಪಗಳ ಹಿನ್ನೆಲೆಯಲ್ಲಿ ಗುರುವಾರ ಶಾಲೆಗೆ ಭೇಟಿ ನೀಡಿದ್ದ ಜಿ.ಪಂ.ಸದಸ್ಯ ಬಿ.ರಾಜಣ್ಣ ಸ್ಥಳ ಪರಿಶೀಲನೆ ನಡೆಸಿದರು. ಸಾರ್ವಜನಿಕರಿಂದ ಎಲ್ಲ ಮಾಹಿತಿ ಪಡೆದು ದೂರನ್ನು ಆಲಿಸಿದರು.
ಕಟ್ಟಡ ನಿರ್ಮಾಣದ ಕಾಮಗಾರಿ ತೀರಾ ಕಳಪೆ ಗುಣಮಟ್ಟದಾಗಿದೆ. ಹಳೆಯದಾದ ಈ ಶಾಲೆಯ ಕೊಠಡಿಯ ಗೋಡೆಗಳು ಇನ್ನೂ ಭದ್ರವಾಗಿವೆ. ಈಗ ನಿರ್ಮಿಸುತ್ತಿರುವ ಕೊಠಡಿಯ ಆಯಸ್ಸು 100 ದಿನ ಬಾಳುವುದೂ ಸಂದೇಹವಿದೆ ಎಂದರು. ಸ್ಥಳದಿಂದಲೇ ಜಿ.ಪಂ. ಕಾರ್ಯ ನಿರ್ವಹಣಾಧಿಕಾರಿಗೆ ದೂರವಾಣಿ ಕರೆ ಮಾಡಿ ತಕ್ಷಣವೇ ಇಲ್ಲಿನ ಕಾಮಗಾರಿಯ ಗುಣಮಟ್ಟ ಪರಿಶೀಲಿಸುವಂತೆ ಸೂಚಿಸಿದರು.
ಕಾಂಗ್ರೆಸ್ ಮುಖಂಡ ಬೈರಾಪುರ ರಾಜಣ್ಣ ಕಾಮಗಾರಿಯ ಗುಣಮಟ್ಟ ಪರಿಶೀಲಿಸಿ ಸರ್ವ ಶಿಕ್ಷಣ ಅಭಿಯಾನದಡಿ ಕೊಠಡಿ ನಿರ್ಮಿಸಲು ಎಸ್ಡಿಎಂಸಿ ಮತ್ತು ಮೇಲುಸ್ತುವಾರಿ ಸಮಿತಿಗೆ ಮಾತ್ರ ಅಧಿಕಾರವಿದೆ.
ತಾ.ಪಂ.ಕಡೆಯಿಂದ ಇದರ ಜವಾಬ್ದಾರಿ ತೆಗೆದುಕೊಳ್ಳಲಾಗಿದೆ. ಈಗ ನಡೆಯುತ್ತಿರುವ ಕಳಪೆ ಕಾಮಗಾರಿ ಅನೇಕ ಗೊಂದಲ ಮತ್ತು ಅನುಮಾನಗಳನ್ನು ಹುಟ್ಟಿಸುತ್ತವೆ ಎಂದರು. ತಾ.ಪಂ. ಮಾಜಿ ಸದಸ್ಯ ವಿರೂಪಾಕ್ಷಯ್ಯ ಮತ್ತು ಕಾಂಗ್ರೆಸ್ ಮುಖಂಡ ಸೊಣ್ಣೇಗೌಡ, ಸಾರ್ವಜನಿಕರು ಕಾಮಗಾರಿ ನಡೆಯುವ ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿಯು ಕಳಪೆ ಗುಣಮಟ್ಟದಾಗಿದ್ದು ಸಂಬಂಧಪಟ್ಟ ಅಧಿಕಾರಿಗಳು ಈ ಕೂಡಲೇ ಗಮನ ಹರಿಸಬೇಕೆಂದು ಒತ್ತಾಯಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.