ಮುನವಳ್ಳಿ: ಸ್ಥಳೀಯ ಪ್ರಾಥಮಿಕ ಸರ್ಕಾರಿ ಹೆಣ್ಣು ಮಕ್ಕಳ ಶಾಲೆಯಲ್ಲಿ ಜಿಲ್ಲಾ ಪಂಚಾಯಿತಿ ಅನುದಾನದಡಿ ಅಂದಾಜು 4.50 ಲಕ್ಷ ರೂಪಾಯಿ ವೆಚ್ಚದಲ್ಲಿ ಹೆಚ್ಚುವರಿ ಕೊಠಡಿ ನಿರ್ಮಾಣ ಕಾಮಗಾರಿಗೆ ಜಿಲ್ಲಾ ಪಂಚಾಯಿತಿ ಸದಸ್ಯ ರವೀಂದ್ರ ಭೂ. ಯಲಿಗಾರ ಈಚೆಗೆ ಭೂಮಿ ಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ದುಂಡಪ್ಪ ಬುರ್ಜಿ, ಎಸ್.ಡಿ.ಎಂ.ಸಿ. ಅಧ್ಯಕ್ಷ ಕುತುಬುದ್ದೀನ್ ಅಲಾದಿ. ಬಾಬಣ್ಣ ಬಾಳಿ. ನಾಗಪ್ಪ ಕಾಮಣ್ಣವರ, ರಿಯಾಜ ಹಡಗಲಿ, ಅಂದಾನಿ ಗೋಮಾಡಿ, ಗಂಗಪ್ಪ ನಲವಡೆ, ದಾದಾಫೀರ ಅತ್ತಾರ ಇತರರು ಉಪಸ್ಥಿತರಿದ್ದರು.
ತರಾಟೆ: ಕೊಠಡಿಗಳ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸುವ ಕಾರ್ಯಕ್ರಮಕ್ಕೆ ಸಮಯಕ್ಕೆ ಕೇವಲ ಒಬ್ಬ ಶಿಕ್ಷಕ ಆಗಮಿಸಿದ್ದು ಜಿಲ್ಲಾ ಪಂಚಾಯ್ತಿ ಸದಸ್ಯ ಯಲಿಗಾರ ಅವರನ್ನು ಕೆರಳಿಸಿತು.
ಅರ್ಧ ಗಂಟೆ ತಡವಾಗಿ ಬಂದ ಉಳಿದ ಶಿಕ್ಷಕರನ್ನು ತರಾಟೆಗೆ ತೆಗೆದುಕೊಂಡ ಅವರು, ಸರಿಯಾದ ಸಮಯಕ್ಕೆ ಶಾಲೆಗೆ ಹಾಜರಿರಲು ಸೂಚಿಸಿದರಲ್ಲದೇ, ಇನ್ನು ಮುಂದೆ ಈ ಘಟನೆ ಮರುಕಳಿಸದಂತೆ ಎಚ್ಚರಿಕೆ ನೀಡಿದರು.