ಚಾಮರಾಜನಗರ: `ಶಾಲೆಗಳಲ್ಲಿ ವಿದ್ಯಾಭ್ಯಾಸ, ಕ್ರೀಡೆಗಳಿಗೆ ಪ್ರೋತ್ಸಾಹ ನೀಡುವಂತೆ ಸಂಗೀತ ಪಾಠವನ್ನು ಅಳವಡಿಸಿ ಸಂಗೀತ ಕ್ಷೇತ್ರವನ್ನು ಬೆಳೆಸಬೇಕು' ಎಂದು ಕಿರುತೆರೆ ನಟ ದರ್ಶನ್ ಸಲಹೆ ನೀಡಿದರು.
ನಗರದ ದೊಡ್ಡಅಂಗಡಿ ಬೀದಿಯಲ್ಲಿ ಭಾನುವಾರ ನಡೆದ ಅಶ್ವಿನಿ ಸಂಗೀತ ಅಕಾಡೆಮಿಯ ಪ್ರಾರಂಭೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಸಂಗೀತ ಕೇವಲ ಪಟ್ಟಣಗಳಿಗೆ ಸೀಮಿತವಾಗಿದ್ದು, ಜಿಲ್ಲೆ ಹಾಗೂ ಗ್ರಾಮೀಣ ಭಾಗಗಳಿಗೂ ಪಸರಿಸಬೇಕಿದೆ. ಸಂಗೀತ ಪ್ರಿಯರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಸಂಗೀತ ಅಕಾಡೆಮಿ ಕಾರ್ಯ ನಿರ್ವಹಿಸಬೇಕು ಎಂದರು.
ಸಂಗೀತ ನಮ್ಮ ನೆಲದಲ್ಲಿ ಬೆಳೆದಿದ್ದರೂ ವಿದೇಶಿಯರು ಇಂದು ಸಂಗೀತ ಕಲಿಕೆಯಲ್ಲಿ ಮುಂದಿದ್ದಾರೆ. ಆದರೆ, ನಮ್ಮವರು ಸಂಗೀತ ಕ್ಷೇತ್ರವನ್ನು ನಿರ್ಲಕ್ಷ್ಯಿಸಿದ್ದಾರೆ. ಪರಿಣಾಮ ಸಂಗೀತ ಕ್ಷೇತ್ರಕ್ಕೆ ಪ್ರೋತ್ಸಾಹ ಕಡಿಮೆಯಾಗಿದೆ. ಸಂಗೀತ ಕಲಿಕೆಯಿಂದ ಅನೇಕ ಖಾಯಿಲೆಗಳು ದೂರವಾಗಿ ಮನಸ್ಸಿಗೆ ನೆಮ್ಮದಿ ಸಿಗುತ್ತದೆ ಎಂದು ಅನೇಕ ವಿಜ್ಞಾನಿಗಳು ಸಹ ತಿಳಿಸಿದ್ದಾರೆ ಎಂದರು.
ಕಿರುತೆರೆ ನಟ ನಿರಂಜನ್ ದೇಶಪಾಡೆ, ರಂಗಕರ್ಮಿ ಕೆ. ವೆಂಕಟರಾಜು, ಅಶ್ವಿನಿ ಸಂಗೀತಾ ಅಕಾಡೆಮಿಯ ಚೇತನ್, ಬಿ.ಎಂ. ಪ್ರಭುಸ್ವಾಮಿ, ವರ್ತಕರ ಸಂಘದ ಅಧ್ಯಕ್ಷ ಪ್ರಭುಸ್ವಾಮಿ, ಆಲೂರು ಬಸವರಾಜು, ಮಾಂಡೋಲಿನ್ ಕುಮಾರ್, ಕೀಬೋರ್ಡ್ ಅರ್ಜುನ್ಸುಹಾನ್, ತಬಲಜಗದೀಶ್ ಹಾಜರಿದ್ದರು.