ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಮೂರು ಶಾಲೆಗಳು `2010-11 ನೇ ಸಾಲಿನ ವಂಡರ್ಲಾ ಗ್ರೀನ್ ಅವಾರ್ಡ್~ಗೆ ಪಾತ್ರವಾಗಿವೆ.
ಮೊದಲ ಮೂರು ಪ್ರಶಸ್ತಿ ಪಡೆದುಕೊಂಡ ಜಯನಗರ 4ನೇ ಬ್ಲಾಕ್ನ ಕಾರ್ಮೆಲ್ ಕಾನ್ವೆಂಟ್ ಸ್ಕೂಲ್, ವರ್ತೂರಿನ ಕೆ.ಕೆ.ಇಂಗ್ಲಿಷ್ ಸ್ಕೂಲ್ ಮತ್ತು ಬಾಗಲೂರಿನ ಡೆಲ್ಲಿ ಪಬ್ಲಿಕ್ ಸ್ಕೂಲ್ಗೆ ವಂಡರ್ಲಾ ಹಾಲಿಡೇಸ್ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ಅರುಣ್ ಕೆ ಚಿಟ್ಟಿಲಪಿಳ್ಳಿ ಅವರು ಕ್ರಮವಾಗಿ 25 ಸಾವಿರ, 15 ಸಾವಿರ ಮತ್ತು 10 ಸಾವಿರ ರೂ ನಗದು ಬಹುಮಾನ, ಪ್ರಶಸ್ತಿ ಫಲಕ ಹಾಗೂ ಪ್ರಶಸ್ತಿ ಪತ್ರವನ್ನು ನೀಡಿ ಗೌರವಿಸಿದರು.
ಮಾಲಿನ್ಯ ನಿಯಂತ್ರಣ ಮಂಡಳಿಯ ಹಿರಿಯ ಪರಿಸರ ಅಧಿಕಾರಿ ಸಾದಿಕ್ ಅಹ್ಮದ್ ಈ ಸಂದರ್ಭದಲ್ಲಿ ಹಾಜರಿದ್ದರು.
ಮೈಸೂರು ರಸ್ತೆಯ ಜನಪ್ರಿಯ ಅಮ್ಯೂಸ್ಮೆಂಟ್ ಪಾರ್ಕ್ ವಂಡರ್ಲಾ, ಪಾಲಿಕೆಯ ಶಾಲೆಗಳಲ್ಲಿ ಪರಿಸರ ಜಾಗೃತಿ ಮೂಡಿಸಲು ಮತ್ತು ಪ್ರೋತ್ಸಾಹಿಸಲು ಈ ಪ್ರಶಸ್ತಿ ಸ್ಥಾಪಿಸಿದೆ.
ಪರಿಸರವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಪರಿಣಾಮಕಾರಿ ಕಾರ್ಯಕ್ರಮ ಅಳವಡಿಸಿಕೊಂಡಿರುವ ಶಾಲೆಗಳನ್ನು ಗುರುತಿಸಿ ಉತ್ತೇಜಿಸುವುದು, ನೈಸರ್ಗಿಕ ಸಂಪತ್ತಿನ ರಕ್ಷಣೆ ಮತ್ತು ಪರಿಸರ ಜಾಗೃತಿಯ ಕ್ರಿಯಾಶೀಲ ಯುವ ಜನಾಂಗ ನಿರ್ಮಾಣ ಇದರ ಉದ್ದೇಶ.