ಎಲ್ಲಾ ಸರ್ಕಾರಗಳೂ ಶಿಕ್ಷಣಕ್ಕೆ ನಮ್ಮ ಮೊದಲ ಆದ್ಯತೆ ಎಂದು ಹೇಳುತ್ತಲೇ ಬಂದಿವೆ. ಆದರೆ ಶಿಕ್ಷಣಕ್ಕೆ ನೀಡುತ್ತಿರುವ ಆದ್ಯತೆ ಎಂಥದೆಂಬುದು ಎಲ್ಲರ ಅನುಭವಕ್ಕೆ ಬಂದಿದೆ.
ಕೊಠಡಿಗಳ ಅವಶ್ಯಕತೆ ಇಲ್ಲದಿದ್ದರೂ ಕೊಠಡಿಗಳ ನಿರ್ಮಾಣಕ್ಕೆ ಹಣ ನೀಡುವ, ಮಕ್ಕಳ ಅನುಪಾತಕ್ಕನುಗುಣವಾಗಿ ಶಿಕ್ಷಕರು ಎಂಬ ಕಾರಣ ನೀಡಿ ಶಿಕ್ಷಕರನ್ನು ಸ್ಥಳಾಂತರಗೊಳಿಸುವ, ಹಲವು ಯೋಜನೆಗಳನ್ನು ಮತ್ತೆ, ಮತ್ತೆ ಮಂಜೂರು ಮಾಡಿ.
ಕೋಟ್ಯಂತರ ರೂ ಹಣವನ್ನು ಸರ್ಕಾರ ಖರ್ಚು ಮಾಡುತ್ತದೆ. ಚುನಾವಣೆಗಳು, ಮತದಾರರ ಯಾದಿ ಪರಿಷ್ಕರಣೆ, ಜನಗಣತಿ, ಗ್ರಾಮ ನಕ್ಷೆ ತಯಾರಿಕೆ, ಬಿಸಿಯೂಟದ ಉಸ್ತುವಾರಿ ಮತ್ತಿತರ ಕೆಲಸಗಳಿಗೆ ಶಿಕ್ಷಕರನ್ನು ಬಳಸಿಕೊಳ್ಳುತ್ತಿದೆ.
ಇದರಿಂದಾಗಿ ಮಕ್ಕಳಿಗೆ ಪಾಠ,ಪ್ರವಚನ ಹಾಗೂ ಓದುವ ಹವ್ಯಾಸ ಬೆಳೆಸುವಂತಹ ಕಾರ್ಯಗಳಿಗೆ ಹಿನ್ನಡೆಯಾಗಿದೆ.
ಶಿಕ್ಷಣಕ್ಕೆ ಭಾರೀ ಹಣ ಖರ್ಚು ಮಾಡುತ್ತಿರುವ ಸರ್ಕಾರ ಪ್ರತಿ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲೊಂದು ಸುಸಜ್ಜಿತ ಗ್ರಂಥಾಲಯ ತೆರೆದು ಪುಸ್ತಕಗಳು ವಿದ್ಯಾರ್ಥಿಗಳ ಕೈಗೆಟುಕುವಂತೆ ಮತ್ತು ಅಲ್ಲೇ ಕುಳಿತು ಓದುವ ವ್ಯವಸ್ಥೆ ಹಾಗೂ ಕಲ್ಪಿಸುವ ಅಗತ್ಯವಿದೆ.
ಶಾಲೆಯ ಒಂದು ಕೊಠಡಿಯನ್ನು ಅದಕ್ಕೆಂದೇ ಮೀಸಲಿರಿಸಿ ಸುಸಜ್ಜಿತ ಗ್ರಂಥಾಲಯ ತೆರೆದು ಅದಕ್ಕೊಬ್ಬ ಗ್ರಂಥಪಾಲಕನನ್ನು ನೇಮಿಸಿದರೆ ಮಕ್ಕಳಲ್ಲಿ ಓದುವ ಹವ್ಯಾಸ ಬೆಳೆಯಬಹುದು. ಬಿಡುವಿನ ಸಮಯದಲ್ಲಿ ಮಕ್ಕಳು, ಆಟೋಟಗಳಲ್ಲಿ ಹಾಗೂ ಗ್ರಂಥಾಲಯದಲ್ಲಿ ಕಳೆಯುವಂತಹ ವಾತಾವರಣ ನಿರ್ಮಾಣ ಮಾಡುವ ಅಗತ್ಯವಿದೆ.