ಪಟ್ಟಣದ ಸರ್ಕಾರಿ ನೌಕರರ ಭವನದ ಸಭಾಂಗಣದಲ್ಲಿ ಜಿಲ್ಲಾ ಶಾಶ್ವತ ನೀರಾವರಿ ಹೋರಾಟ ಸಮಿತಿ ವತಿಯಿಂದ ಸೋಮವಾರ ನಡೆದ ತಾಲ್ಲೂಕು ಮಟ್ಟದ ಸಮಾವೇಶ ಉದ್ಘಾಟಿಸಿ ಮಾತನಾಡಿ, ರಾಜ್ಯ ಸರ್ಕಾರ ಶಾಶ್ವತ ನೀರಾವರಿ ಯೋಜನೆಯನ್ನು ಗಂಭೀರವಾಗಿ ಪರಿಗಣಿಸಿಲ್ಲ. ಎತ್ತಿನ ಹೊಳೆಯಿಂದ ನೀರು ಹರಿಸುವುದಾಗಿ ಹೇಳಿ ಕಣ್ಣೊರೆಸುವ ತಂತ್ರ ಅನುಸರಿಸುತ್ತಿದೆ. ಇದರಿಂದ ಇಲ್ಲಿನ ಜನ ಫ್ಲೋರೈಡ್ ಮಿಶ್ರಿತ ನೀರು ಸೇವಿಸಿ ಪ್ಲೋರೋಸಿಸ್ ರೋಗಕ್ಕೆ ತುತ್ತಾಗುತ್ತಿದ್ದಾರೆ ಎಂದು ಆಪಾದಿಸಿದರು.
ನೀರು ಬಾಯಾರಿದ ಜನರ ಅಗತ್ಯವಾಗಿದೆ. ವಿಧಾನ ಸಭೆ ಚುನಾವಣೆ ಸಂದರ್ಭದಲ್ಲಿ ಪರಮಶಿವಯ್ಯ ವರದಿ ಜಾರಿ ಇಲ್ಲಿನ ಜನ ಪ್ರತಿನಿಧಿಗಳ ಜಪವಾಗಿತ್ತು. ಆದರೆ ಈಗ ಆ ಬಗ್ಗೆ ಚಕಾರ ಎತ್ತುತ್ತಿಲ್ಲ. ಹೋರಾಟದ ಮೂಲಕ ಶಾಶ್ವತ ನೀರಾವರಿ ಪಡೆಯಬೇಕಾದ ಅನಿವಾರ್ಯತೆ ಉಂಟಾಗಿದೆ. ಅದಕ್ಕೆ ಜನ ಸಾಮಾನ್ಯರು ಸಜ್ಜಾಗಬೇಕು. ಪರಮಶಿವಯ್ಯ ವರದಿ ಜಾರಿಗಾಗಿ ಆಗ್ರಹಿಸಿ ಜನವರಿ ಕೊನೆ ವಾರದಲ್ಲಿ ಏರ್ಪಡಿಸಿರುವ ವಿಧಾನಸೌಧ ಚಲೋ ಕಾರ್ಯಕ್ರಮದಲ್ಲಿ ಸಮಾಜದ ಎಲ್ಲ ಸಮುದಾಯದ ಜನ ಸ್ವಯಂ ಪ್ರೇರಣೆಯಿಂದ ಭಾಗವಹಿಸಬೇಕು ಎಂದು ಮನವಿ ಮಾಡಿದರು.
ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಪಿ.ಆರ್.ಸೂರ್ಯನಾರಾಯಣ, ವೆಂಕಟೇಶ್ವರ ಗ್ರಾಮೀಣ ಆರೋಗ್ಯ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ.ವೆಂಕಟಾಚಲ, ಮುಖಂಡರಾದ ಕೋಟೇಶ್, ವಿಶ್ವನಾಥ್ ಶಾಶ್ವತ ನೀರಾವರಿ ಅಗತ್ಯದ ಬಗ್ಗೆ ಮಾತನಾಡಿದರು.
ವಿವಿಧ ಸಂಘಟನೆಗಳ ಮುಖಂಡರಾದ ವಿ.ನಾಗಪ್ಪ, ಅಕ್ಬರ್ ಷರೀಫ್, ವಿಶ್ವನಾಥರೆಡ್ಡಿ, ಜಯಮ್ಮ, ಜಿ.ಈಶ್ವರಮ್ಮ, ಆನಂದ್, ಜಿ.ವಿ.ಲಕ್ಷ್ಮೀದೇವಮ್ಮ, ನಾಗಭೂಷಣ, ಪಾತಕೋಟ ನವೀನ್ ಕುಮಾರ್ ಉಪಸ್ಥಿತರಿದ್ದರು.