ಬೆಂಗಳೂರು: ಕೂಡ್ಲಿಗಿ ಶಾಸಕ ಬಿ.ನಾಗೇಂದ್ರ ಒಡೆತನದ ಈಗಲ್ ಟ್ರೇಡರ್ಸ್ ಕಂಪೆನಿ ವಿರುದ್ಧವೂ ಬೇಲೆಕೇರಿ ಬಂದರಿನ ಮೂಲಕ ಅದಿರು ಕಳ್ಳಸಾಗಣೆ ಮಾಡಿದ ಆರೋಪವಿದೆ. ಈ ಬಗ್ಗೆಯೂ ಸಿಬಿಐ ತನಿಖೆ ನಡೆಯುತ್ತಿದೆ ಎಂಬ ಆರೋಪ ವಿದೆ. ನಾಗೇಂದ್ರ ಕೂಡ ಬಂಧನದ ಭೀತಿಯಿಂದ ತಲೆಮರೆಸಿಕೊಂಡಿದ್ದಾರೆ ಎಂಬ ವದಂತಿ ಹಬ್ಬಿದೆ.
ಮೂಲಗಳ ಪ್ರಕಾರ, ನಾಗೇಂದ್ರ ವಿರುದ್ಧದ ಪ್ರಕರಣದ ತನಿಖೆ ಇನ್ನೂ ನಿರ್ಣಾಯಕ ಘಟ್ಟ ತಲುಪಿಲ್ಲ. ಈ ಕಾರಣದಿಂದ ವಿಚಾರಣೆಗೆ ಹಾಜರಾ ಗುವಂತೆ ನಾಗೇಂದ್ರ ಅವರಿಗೆ ಸಿಬಿಐ ಅಧಿಕಾರಿಗಳು ಇನ್ನೂ ನೋಟಿಸ್ ಜಾರಿ ಮಾಡಿಲ್ಲ. ಆದರೆ ಎರಡು ದಿನಗಳಿಂದ ನಾಗೇಂದ್ರ ಅವರು ಎಲ್ಲಿಯೂ ಬಹಿರಂಗವಾಗಿ ಕಾಣಿಸಿ ಕೊಂಡಿಲ್ಲ. ಶಾಸಕರ ಆಪ್ತ ವಲಯದವರ ಪ್ರಕಾರ, ನಾಗೇಂದ್ರ ಬೆಂಗಳೂರಿನಲ್ಲಿಯೇ ಇದ್ದಾರೆ. ಆದರೆ, ಅವರ ಪ್ರತಿಕ್ರಿಯೆ ಪಡೆಯಲು ‘ಪ್ರಜಾವಾಣಿ’ ಹಲವು ಬಾರಿ ಪ್ರಯತ್ನಿಸಿದರೂ ಶಾಸಕರು ಕರೆ ಸ್ವೀಕರಿಸಲಿಲಲ್ಲ.