ಕೆಜಿಎಫ್: ಚಿನ್ನದ ಗಣಿ ಸಮಸ್ಯೆಯನ್ನು ಬಗೆಹರಿಸಲು ಕೇಂದ್ರ ಸಚಿವ ಕೆ.ಎಚ್.ಮುನಿಯಪ್ಪ ಪ್ರಾಮಾಣಿಕ ಪ್ರಯತ್ನ ಮಾಡಿದ್ದರೂ, ಶಾಸಕ ವೈ.ಸಂಪಂಗಿ ಮುಂಬರುವ ಚುನಾವಣೆ ದೃಷ್ಟಿಯಿಂದ ಕಾಂಗ್ರೆಸ್ ಪಕ್ಷದ ಮೇಲೆ ಕ್ಷುಲ್ಲಕ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ನಗರ ಮತ್ತು ಬೇತಮಂಗಲ ಬ್ಲಾಕ್ ಕಾಂಗ್ರೆಸ್ ಮುಖಂಡರು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.
ಈಚೆಗೆ ನಗರದ ಗೌತಂನಗರದಲ್ಲಿ ನಡೆದಿದ್ದ ಸಾರ್ವಜನಿಕ ಸಭೆಯಲ್ಲಿ ಶಾಸಕ ವೈ.ಸಂಪಂಗಿ ತಮ್ಮ ಹುದ್ದೆಗೆ ತಕ್ಕುದಲ್ಲದ ರೀತಿಯಲ್ಲಿ ಮಾತನಾಡಿದ್ದಾರೆ.
ನಗರದಲ್ಲಿ ಗಣಿ ಕಾರ್ಮಿಕರು ಸಂಕಷ್ಟಕ್ಕೆ ಒಳಗಾಗಿದ್ದರೂ, ವಿಧಾನಸಭೆಯಲ್ಲಿ ಗಣಿ ಕಾರ್ಮಿಕರಿಗೆ ಬಿಪಿಎಲ್ ಕಾರ್ಡ್ ವಿತರಿಸಬೇಕೆಂದು ಮಾತನಾಡಿಲ್ಲ. ಸಿಲಿಕೋಸಿಸ್ ಕಾಯಿಲೆಯಿಂದ ಹಲವು ಕಾರ್ಮಿಕರು ನಿಧನ ಹೊಂದಿದ್ದರೂ, ರಾಜ್ಯ ಸರ್ಕಾರದಿಂದ ಯಾವ ಯೋಜನೆಯನ್ನು ಶಾಸಕರು ತಂದಿದ್ದಾರೆ ಎಂದು ಮುಖಂಡರು ಪ್ರಶ್ನಿಸಿದರು.
ಯಾವುದೇ ಅಧಿಕೃತ ದಾಖಲೆಗಳು ಇಲ್ಲದಿದ್ದರೂ, ಗ್ರಾಮೀಣ ಪ್ರದೇಶದಲ್ಲಿ ಜೆಸಿಬಿ ತೆಗೆದುಕೊಂಡು ಬಡವರ ಅಂಗಡಿ ಮತ್ತು ಮನೆಗಳನ್ನು ಒಡೆದು ಹಾಕುತ್ತಿರುವುದು ಶಾಸಕರ ದೊಡ್ಡ ಸಾಧನೆಯಾಗಿದೆ. ಇಂಥ ಶಾಸಕರಿಂದ ಕಾಂಗ್ರೆಸ್ ಮುಖಂಡರು ಕಲಿಯುವುದು ಏನೂ ಇಲ್ಲ ಎಂದರು.
ಗಣಿ ಸಮಸ್ಯೆ ಇತ್ಯರ್ಥಕ್ಕೆ ಕೇಂದ್ರ ಸರ್ಕಾರ ಆಸಕ್ತಿ ವಹಿಸಿ ಎಲ್ಲಾ 19 ಕಾರ್ಮಿಕ ಸಂಘಟನೆಗಳನ್ನು ಒಗ್ಗೂಡಿಸಿ, ನ್ಯಾಯಾಲಯದಲ್ಲಿರುವ ವ್ಯಾಜ್ಯಗಳನ್ನು ವಾಪಸ್ ತೆಗೆಯಬೇಕೆಂದು ಪ್ರಯತ್ನ ನಡೆಸುತ್ತಿದೆ. ಆದರೆ ಶಾಸಕರು ಇಂತಹ ಪ್ರಯತ್ನಕ್ಕೆ ಬೆಂಬಲ ಕೊಡದೆ ಬಿಜಿಎಂಎಲ್ ಸಮಸ್ಯೆಯನ್ನು ಇನ್ನೂ ಜೀವಂತವಾಗಿಡಲು ಪ್ರಯತ್ನಿಸುತ್ತಿದ್ದಾರೆ ಎಂದು ದೂರಿದರು.
ಕೆಜಿಎಫ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶ್ರೀಧರರಾಜ್, ಮುಖಂಡರಾದ ನಾರಾಯಣರೆಡ್ಡಿ, ಲಕ್ಷ್ಮೀನಾರಾಯಣ, ಜಯಪಾಲ್, ರಾಧಾಕೃಷ್ಣರೆಡ್ಡಿ, ಮುತ್ತು, ರಶೀದ್ಖಾನ್, ಕಿಶೋರ್ಕುಮಾರ್ ಇದ್ದರು.