ಬೆಂಗಳೂರು: ಬಿ.ಎಸ್.ಯಡಿಯೂರಪ್ಪ ಅವರ ಜತೆ ಗುರುತಿಸಿಕೊಂಡಿರುವ ಶಾಸಕರ ವಿರುದ್ಧ ಬಿಜೆಪಿ ವರಿಷ್ಠರು ಕ್ರಮ ತೆಗೆದುಕೊಂಡರೆ ಪರಿಸ್ಥಿತಿ ನೆಟ್ಟಗಿರುವುದಿಲ್ಲ. ಅದರಿಂದ ಎದುರಾಗುವ ಪರಿಣಾಮಗಳಿಗೂ ಬಿಜೆಪಿ ಪ್ರಮುಖರೇ ಹೊಣೆಯಾಗುತ್ತಾರೆ ಎಂದು ಕೆಜೆಪಿ ಅಧ್ಯಕ್ಷ ವಿ.ಧನಂಜಯಕುಮಾರ್ ಶನಿವಾರ ಇಲ್ಲಿ ಎಚ್ಚರಿಸಿದರು.
ಪಕ್ಷದ ಕಚೇರಿಯಲ್ಲಿ ಕೋಲಾರ, ಗುಲ್ಬರ್ಗ ಮತ್ತು ಬೆಂಗಳೂರು ನಗರದ ಕೆಲವು ಬಿಜೆಪಿ ಕಾರ್ಯಕರ್ತರನ್ನು ಕೆಜೆಪಿಗೆ ಸೇರಿಸಿಕೊಂಡ ನಂತರ ಅವರು ಸುದ್ದಿಗಾರರ ಜತೆ ಮಾತನಾಡಿದರು.
ಯಡಿಯೂರಪ್ಪ ಕೆಜೆಪಿಗೆ ಸೇರ್ಪಡೆಯಾದಾಗ ಕೆಲವು ಬಿಜೆಪಿ ಶಾಸಕರು, ಸಂಸದರು ಅವರ ಜತೆಗಿದ್ದರು. ಈ ಕಾರಣಕ್ಕೇ ಅವರ ವಿರುದ್ಧ ಕ್ರಮ ತೆಗೆದುಕೊಂಡರೆ ಕಠಿಣವಾದ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದೂ ಗುಡುಗಿದರು.
ಬೇಳೂರು ಗೋಪಾಲಕೃಷ್ಣ ಅವರು ಯಡಿಯೂರಪ್ಪ ಅವರನ್ನು ಕುರಿತು ಟೀಕೆ ಮಾಡಿರುವುದಕ್ಕೆ ಧನಂಜಯಕುಮಾರ್ ತಿರುಗೇಟು ನೀಡಿದರು. ಬೇಳೂರು ತಮ್ಮ ಗುರುವಿಗೆ (ಈಶ್ವರಪ್ಪ) ತಕ್ಕ ಶಿಷ್ಯ ಎಂಬುದನ್ನು ತಮ್ಮ ಮಾತುಗಳ ಮೂಲಕ ತೋರಿಸಿದ್ದಾರೆ ಎಂದು ಟೀಕಿಸಿದರು.