ಬೆಂಗಳೂರು: ‘ಬೆಳಗಾವಿಯಲ್ಲಿ ವಿಧಾನಸಭೆಯ ಅಧಿವೇಶನ ನಡೆಯುವಾಗಲೇ ಎಂಇಎಸ್ ಮಹಮೇಳಾವದಲ್ಲಿ ರಾಜ್ಯಕ್ಕೆ ಅವಮಾನಕರವಾದ ಹೇಳಿಕೆ ನೀಡಿರುವ ಎಂಇಎಸ್ ಶಾಸಕ ಸಂಭಾಜಿ ಪಾಟೀಲ ಅವರ ಮೇಲೆ ಕ್ರಿಮಿನಲ್ ಪ್ರಕರಣವನ್ನು ದಾಖಲಿಸಬೇಕು’ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ‘ಮುಖ್ಯಮಂತ್ರಿ’ ಚಂದ್ರು ಒತ್ತಾಯಿಸಿದರು.
ಕನ್ನಡ ಜಾಗೃತಿ ವೇದಿಕೆಯು ಭಾನುವಾರ ಆಯೋಜಿಸಿದ್ದ 20 ನೇ ವಾರ್ಷಿಕೋತ್ಸವ ಕಾರ್ಯಕ್ರಮ ಹಾಗೂ ವಿಶ್ವ ಕನ್ನಡಿಗರ ಮಹಾ ಸಮ್ಮೇಳನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
‘ಕನ್ನಡದ ಸಂಸ್ಕೃತಿಗೆ ಧಕ್ಕೆಯಾಗುವಂತಹ ಹೇಳಿಕೆ ನೀಡಿರುವುದನ್ನು ಸರ್ಕಾರ ಲಘುವಾಗಿ ಪರಿಗಣಿಸಬಾರದು. ಇಲ್ಲಿ ರಾಜೀಸೂತ್ರವನ್ನು ಕೈಗೊಳ್ಳದೆ ಕಠಿಣ ಕ್ರಮಗಳನ್ನು ಕೈಗೊಳ್ಳಲು ಮುಂದಾಗಬೇಕು’ ಎಂದರು. ‘ಕನ್ನಡ ಪರ ಹೋರಾಟಗಾರರು ದರೋಡೆಕೋರರಲ್ಲ, ಕಳ್ಳರಲ್ಲ. ಅವರು ನಾಡಿನ ಸಂಸ್ಕೃತಿ ಮತ್ತು ಏಳಿಗೆಗೆ ಶ್ರಮಿಸುತ್ತಿದ್ದಾರೆ. ಇದರಿಂದ, ಎಲ್ಲ ಕನ್ನಡ ಪರ ಹೋರಾಟಗಾರರ ಮೇಲಿರುವ ಪ್ರಕರಣಗಳನ್ನು ಸರ್ಕಾರ ಕೈ ಬಿಡಬೇಕು’ ಎಂದು ಹೇಳಿದರು.
‘ಕೆಪಿಎಸ್ಸಿ ಹಗರಣದಲ್ಲಿ ಅಮಾಯಕರಿಗೆ ಶಿಕ್ಷೆಯಾಗಬಾರದು. ಅರ್ಹತೆಯಿಂದ ಆಯ್ಕೆಯಾದವರನ್ನು ವಜಾ ಮಾಡಿ ಶಿಕ್ಷೆ ನೀಡುವುದು ಬೇಡ. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ನೀಡಬೇಕು’ ಎಂದು ಹೇಳಿದರು.
ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಮಾತನಾಡಿ, ‘ಕನ್ನಡ ಸಾಹಿತ್ಯ ಚರಿತ್ರೆಯನ್ನು ಮಕ್ಕಳಿಗೆ ತಿಳಿಸಬೇಕು. ಕನ್ನಡ ಓದಲು ಬರೆಯಲು ಬೇರೆ ಭಾಷಿಕರಿಗೂ ಕಲಿಸಬೇಕು. ಇಲ್ಲಿ ಬಂದು ನೆಲೆಸಿದವರೂ ಆದ್ಯತೆಯ ಮೇಲೆ ಕನ್ನಡವನ್ನು ಕಲಿಯಬೇಕು’ ಎಂದರು.