ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಸಕರ ವಿರುದ್ಧ ಸಂಘಟನೆಗಳ ಆಕ್ರೋಶ

Last Updated 9 ಫೆಬ್ರುವರಿ 2012, 8:00 IST
ಅಕ್ಷರ ಗಾತ್ರ

ಗಂಗಾವತಿ: ಪ್ರಜಾ ಪ್ರತಿನಿಧಿಗಳ ಸ್ಥಾನದಲ್ಲಿರುವ ವ್ಯಕ್ತಿಗಳು ಈ ರೀತಿ ವರ್ತಿಸಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಕಪ್ಪುಚುಕ್ಕೆ ಎಂದು ಸಂಸದ ಎಸ್. ಶಿವರಾಮಗೌಡ ವಿಷಾದಿಸಿದರು.

ವಕೀಲರ ಸಂಘದ ತಾಲ್ಲೂಕು ಘಃಟಕದ ಪದಾಧಿಕಾರಿಗಳ ಆಯ್ಕೆಗೆ ನಡೆಯುತ್ತಿರುವ ಚುನಾವಣೆಯಲ್ಲಿ  ಮತ ಚಲಾಯಿಸಲು ಬುಧವಾರ ಕೋರ್ಟ್ ಆವರಣಕ್ಕೆ ಆಗಮಿಸಿದ್ದ ಸಂದರ್ಭದಲ್ಲಿ ತಮ್ಮನ್ನು ಭೇಟಿಮಾಡಿದ ಸುದ್ದಿಗಾರರೊಂದಿಗೆ ಮಾತನಾಡಿದರು.

ಶಾಸಕರಾದ ಸವದಿ, ಸಿ.ಸಿ. ಪಾಟೀಲ್ ಮತ್ತು ಕೃಷ್ಣ ಪಲೇಮಾರು ಮಾಡಿರುವುದು ಅಕ್ಷಮ್ಯ ಅಪರಾಧ. ಘಟನೆ ಆಕಸ್ಮಿಕವೋ, ಅಚಾತುರ್ಯವೋ ಒಟ್ಟಾರೆ ತಪ್ಪು. ಈ ಘಟನೆಯಿಂದ ಅತ್ತ ಪ್ರಜಾಪ್ರಭುತ್ವ ವ್ಯವಸ್ಥೆ ಇತ್ತ ಪಕ್ಷಕ್ಕೆ ಕಪ್ಪುಚುಕ್ಕೆ ಇಟ್ಟಂತಾಗಿದೆ.

ತಪ್ಪಿತಸ್ಥರಿಗೆ ಸದನವು ತನಿಖಾ ತಂಡ ರಚಿಸಿದ್ದು ವರದಿ ಆಧಾರಿಸಿ ಕ್ರಮ ಕೈಗೊಳ್ಳುತ್ತದೆ. ಅದಕ್ಕೂ ಮುನ್ನ ಜನ ಸಮಾನ್ಯನಾಗಿ ಹೇಳಬೇಕೆಂದರೆ ಕಳಂಕಿತರು ಶಾಸಕ ಸ್ಥಾನಕ್ಕೂ ಅನರ್ಹರು. ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂಬ ಅಭಿಪ್ರಾಯ ವ್ಯಕ್ತಪಡಿಸಿದರು,

ಯಲಬುರ್ಗಾ ವರದಿ: ಸದನದಲ್ಲಿ ಸೆಕ್ಸ್‌ಫಿಲಂ ನೋಡುತ್ತಾ ಕಾಲಹರಣ ಮಾಡಿದ ಸಹಕಾರ ಮಂತ್ರಿ ಲಕ್ಷ್ಮಣ ಸವದಿ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರು ಎಂದು ಹೇಳಿಕೊಳ್ಳುವುದು ಜಿಲ್ಲೆಗೆ ಅವಮಾನದ ಸಂಗತಿಯಾಗಿದೆ ಎಂದು ಆಗ್ರಹಿಸಿ ಭಾರತ ವಿದ್ಯಾರ್ಥಿ ಫೆಡರೇಷನ್ ತಾಲ್ಲೂಕು ಸಮಿತಿ ಪದಾಧಿಕಾರಿಗಳು ಹಾಗೂ ವಿದ್ಯಾರ್ಥಿಗಳು ಬುಧವಾರ ಧರಣಿ ನಡೆಸಿದರು.

ತಾಲ್ಲೂಕು ಘಟಕದ ಅಧ್ಯಕ್ಷ ರಾಶೀದ್ ಖಾಜಿ ಮಾತನಾಡಿ, ಬರಗಾಲ ಪ್ರದೇಶ, ಹಿಂದುಳಿದ ಪ್ರದೇಶದ ಪ್ರತಿನಿಧಿಯಾಗಿ ಈ ಭಾಗದ ಸಮಗ್ರ ಅಭಿವೃದ್ಧಿ ಬಗ್ಗೆ ಸದನದಲ್ಲಿ ಚರ್ಚೆ ಮಾಡುವುದನ್ನು ಬಿಟ್ಟು ರಾಜಲೀಲೆಯ ಚಿತ್ರಗಳನ್ನು ವೀಕ್ಷಿಸುವ ಒಬ್ಬ ಮಂತ್ರಿ ಯಾವತ್ತು ಜನನಾಯಕನಲ್ಲ ಎಂದರು.

ಜಿಲ್ಲಾ ಉಪಾಧ್ಯಕ್ಷ ಹನಮಂತ ಭಜಂತ್ರಿ, ಕಾರ್ಯದರ್ಶಿ ಉಮೇಶ ಗುಡದಪ್ಪನವರ ಹಾಗೂ ಇತರರು ಇದ್ದರು.
ಖಂಡನೆ: ಪ್ರತಿಭಟನಾ ರ‌್ಯಾಲಿ ನಡೆಸುತ್ತಿದ್ದ ಸಂದರ್ಭದಲ್ಲಿ ಸ್ಥಳೀಯ ಪಿಎಸ್‌ಐ ಏಕಾಏಕೀ ಬಂದು ಪರವಾನಿಗೆ ಇಲ್ಲದೆ ಪ್ರತಿಭಟನೆ ಮಾಡುತ್ತಿದ್ದೀರಿ ಎಂದು ಸಂಘಟನೆಯ ಮುಖ್ಯಸ್ಥರನ್ನು ಜೀಪಿನಲ್ಲಿ ಕರೆದುಕೊಂಡು ಹೋಗಿ ನಂತರ ಬಿಡುಗಡೆ ಮಾಡಿದ ವರ್ತನೆ ಮಾನವೀಯವಾಗಿತ್ತು, ಇವರ ಖಂಡನೀಯ ಪ್ರವೃತ್ತಿಗೆ ಮೇಲಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು, ಇಲ್ಲದೇ ಹೋದರೆ ಸಂಘಟನೆಗಳ ವತಿಯಿಂದ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಹನಮಂತ ಭಜಂತ್ರಿ ಎಚ್ಚರಿಸಿದ್ದಾರೆ.

ಕಾರಟಗಿ ವರದಿ: ಸಚಿವದ್ವಯರನ್ನು ಸಚಿವ ಸ್ಥಾನದ ಜೊತೆಗೆ ಶಾಸಕ ಸ್ಥಾನದಿಂದಲೂ ಅನರ್ಹಗೊಳಿಸಬೇಕು ಎಂದು ಬುಧವಾರ ಬೆಳಿಗ್ಗೆ ಕನ್ನಡಸೇನೆ ಕರ್ನಾಟಕ, ತುಂಗಭದ್ರಾ ಲಘು ವಾಹನ ಚಾಲಕರ ಸಂಘ ಹಾಗೂ ಮಧ್ಯಾಹ್ನ ಬ್ಲಾಕ್ ಕಾಂಗ್ರೆಸ್ ಸಮಿತಿ ಭಾರಿ ಪ್ರತಿಭಟನೆ ನಡೆಸಿದರು. ಸಮೀಪದ ಸಿದ್ದಾಪೂರದಲ್ಲಿ ರಸ್ತೆತಡೆ ನಡೆಸಿ, ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಲಾಯಿತು.
 
ಕನ್ನಡಸೇನೆ ಕರ್ನಾಟಕ, ತುಂಗಭದ್ರಾ ಲಘು ವಾಹನ ಚಾಲಕರ ಸಂಘದ ಪ್ರತಿಭಟನೆಯಲ್ಲಿ ಪ್ರಮುಖರಾದ ರವಿ ನಂದಿಹಳ್ಳಿ, ಪ್ರಭು ಉಪನಾಳ, ಪರಶುರಾಮ ಸಾಲೋಣಿ, ಗೋವಿಂದ ಈಳಿಗೇರ ಮೊದಲಾದವರು ಮಾತನಾಡಿ ಘಟನೆಯನ್ನು ಖಂಡಿಸಿ, ಸಚಿವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಸವದಿ, ಪಾಟೀಲ್‌ರು ವಿಧಾನಸಭೆಯಲ್ಲಿ ಅತ್ಯಂತ ಹೀನಾಯ ಘಟನೆಗೆ ಕಾರಣರಾಗಿದ್ದಾರೆ. ಗಂಭೀರ ಚರ್ಚೆಯಲ್ಲೂ ಅಸ್ಲೀಲ ಚಿತ್ರಗಳನ್ನು ನೋಡುತ್ತಾ ಬೇಜವಬ್ದಾರಿತನವನ್ನು ಮೆರೆದಿದ್ದಾರೆ. ಇವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸಿ, ಮುಂದೆ ವಿಧಾನಸಭೆ ಪ್ರವೇಶಿಸದಂತೆ ಮಾಡಬೇಕು. ತಕ್ಷಣವೆ ಬಂಧಿಸಿ, ಕಠಿಣ ಕಾನೂನು ಕ್ರಮ ಕೊಗೊಳ್ಳಬೇಕು ಎಂದು ಆಗ್ರಹಿಸಿದರು.

ಈಶಪ್ಪ ಇಟ್ಟಂಗಿ, ಮೊಹಿನಪಾಶಾ, ಬಸವರಾಜ್, ಶರಣಪ್ಪ ಸೇರಿದಂತೆ ನೂರಾರು ಕಾರ್ಯಕರ್ತರು ಇದ್ದರು.
ಕಾಂಗ್ರೆಸ್‌ನಿಂದ ಮೆರವಣಿಗೆ: ಕಾರಟಗಿ ಬ್ಲಾಕ್ ಕಾಂಗ್ರೆಸ್‌ನಿಂದ ಪ್ರತಿಭಟನಾ ಮೆರವಣಿಗೆ, ಸವದಿ ಪ್ರತಿಕೃತಿ ದಹಿಸಿ, ವಿಧಾನಸಭೆಯನ್ನು ವಿಸರ್ಜಿಸಿ ಹೊಸ ಜನಾದೇಶ ಪಡೆಯುವಂತೆ ಆಗ್ರಹಿಸಲಾಯಿತು.

ನೇತೃತ್ವ ವಹಿಸಿದ್ದ ಮುಖಂಡರಾದ ಮುಕುಂದರಾವ್ ಭವಾನಿಮಠ, ಕೆ. ಪರಸಪ್ಪ, ಡಾ. ಕೆ. ಎನ್. ಪಾಟೀಲ್ ಮೊದಲಾದವರು ಮಾತನಾಡಿ ಹಾಲಪ್ಪರ ಬಲಾತ್ಕಾರ, ರೇಣುಕಾಚಾರ್ಯರ ಕಿಸ್ಸಿಂಗ್, ಬಿಎಸ್‌ವೈರ ಭೂಹಗರಣ, ಉಡುಪಿ ರೇವ್ ಪಾರ್ಟಿಯಂಥಹ ಹಗರಣಗಳ ಸುಳಿಯಲ್ಲಿರುವ ಬಿಜೆಪಿ ಸರ್ಕಾರ ಲಜ್ಜೆಗೆಟ್ಟ, ಮಾನಗೆಟ್ಟದ್ದಾಗಿದೆ. ಸರ್ಕಾರದಲ್ಲಿರುವವರಿಗೆ  ಆತ್ಮಗೌರವ, ನೈತಿಕತೆ ಇದ್ದರೆ ವಿಧಾನಸಭೆಯನ್ನು ವಿಸರ್ಜಿಸಬೇಕು.

ನೀಲಿಚಿತ್ರ ವೀಕ್ಷಿಸಿದ ಖ್ಯಾತಿಯ ಸಚಿವರಿಗೆ ವಿಧಾನಸಭೆಯ ಪ್ರವೇಶಕ್ಕೆ ನಿರ್ಬಂಧ ಹಾಕಬೇಕು ಎಂದು ಆಗ್ರಹಿಸಿದರು.

ಪ್ರಮುಖರಾದ ವಿಶ್ವನಾಥರೆಡ್ಡಿ ಹೊಸಮನಿ, ಕೆ. ಸಿದ್ಧನಗೌಡ, ಶಿವರಡ್ಡಿ ನಾಯಕ, ಸಿ. ಗದ್ದೆಪ್ಪ, ಎಸ್. ಎಂ. ಜಿಲಾನಿಸಾಬ, ಸಿ. ಶಿವಪ್ಪ, ಎಂ. ಸಂದೀಪಗೌಡ, ಕೋಟ್ಯಾಳ ತಾಯಪ್ಪ, ಕರಿಬಸಪ್ಪ ಬೂದಗುಂಪಾ, ಶರಣಪ್ಪ ಕೊನ್ನಾಪೂರ, ಸೋಮರಾಜ್ ವಡಕಿ, ಅಯ್ಯಪ್ಪ ಉಪ್ಪಾರ, ಕಂಠೆಪ್ಪ ಸೈಕಲ್‌ಶಾಪ್, ಚಿಕ್ಕಯ್ಯಪ್ಪ ಸೇರಿದಂತೆ ನೂರಾರು ಕಾರ್ಯಕರ್ತರಿದ್ದರು.

ಸಿದ್ದಾಪೂರದಲ್ಲಿ: ಸಮೀಪದ ಸಿದ್ದಾಪೂರದಲ್ಲಿ ಸವದಿ, ಪಾಟೀಲ್, ಪಾಲೇಮಾರ ಅವರ ಶಾಸಕತ್ವವನ್ನು ಅನರ್ಹಗೊಳಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ, ಕನ್ನಡ ಸೇನೆ ಕರ್ನಾಟಕದ ಅನೇಕ ಘಟಕಗಳು ರಸ್ತೆತಡೆ, ಪ್ರತಿಕೃತಿ ದಹನ ಮಾಡಿ ಪ್ರತಿಭಟಿಸಿದರು. ಸಿದ್ದಾಪೂರ ಸೇರಿದಂತೆ ಅನೇಕ ಗ್ರಾಮಸ್ಥರು ಪಾಲ್ಗೊಂಡಿದ್ದರು. ಪರನಗೌಡ, ಗ್ರಾಪಂ ಅಧ್ಯಕ್ಷ ಮಾರೆಪ್ಪ, ಪ್ರಮೋದ ಭಾವಿ, ವೀರಭದ್ರಪ್ಪ, ಚರಣರಾಜ್, ಅಮರೇಶ್ ಕೊಟ್ನೆಕಲ್, ಸೇಮಿನ್, ಚನ್ನಬಸವ, ಪ್ರಭು, ಶರಣಪ್ಪ ಗುಂಡೇಗೌಡ್ರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಕುಕನೂರು ವರದಿ: ದುವರ್ತನೆ ತೋರಿದ ಸಚಿವರನ್ನು ಶಾಸಕತ್ವ ಸ್ಥಾನದಿಂದ ವಜಾಗೊಳಿಸಬೇಕೆಂದು ಆಗ್ರಹಿಸಿ ಕರವೇ (ನಾರಾಯಣಗೌಡ ಬಣ) ಕಾರ್ಯಕರ್ತರು ಇಲ್ಲಿಯ ಶಿರೂರ ವೀರಭದ್ರಪ್ಪ ವರ್ತುಳದಲ್ಲಿ ಬುಧವಾರ ಬೆಳಿಗ್ಗೆ ಪ್ರತಿಕೃತಿ ದಹಿಸುವ ಮೂಲಕ ಪ್ರತಿಭಟಿಸಿದರು.

ವಿಧಾನ ಸೌಧ ರಾಜ್ಯದ ಆರೂವರೆ ಕೋಟಿ ಜನರ ಹಾಗೂ ಪ್ರಜಾತಂತ್ರ ವ್ಯವಸ್ಥೆಯ ದೇಗುಲ, ಆದರೆ ಬಿ.ಜೆ.ಪಿ ನೇತೃತ್ವದ ಸರ್ಕಾರದಲ್ಲಿ ವಿವಿಧ ಇಲಾಖೆಗಳ ಸಚಿವರಾಗಿ ಆಡಳಿತ ನಡೆಸುತ್ತಿರುವ ಲಕ್ಷ್ಮಣ ಸವದಿ, ಸಿ.ಸಿ.ಪಾಟೀಲ ಹಾಗೂ ಕೃಷ್ಣ ಪಾಲೇಮಾರ ಇವರು ರಾಜ್ಯದ ಸಮಸ್ಯೆಗಳ ಕುರಿತು ತೀವೃ ಚರ್ಚೆ ನಡೆಯುತ್ತಿರುವ ಸಂದರ್ಭದಲ್ಲಿ ತಮ್ಮ ಮೊಬೈಲ್‌ನಲ್ಲಿ ಅಶ್ಲೀಲ ಚಿತ್ರ ವೀಕ್ಷಿಸಿದ ಸಂಗತಿ ಇಡೀ ರಾಜ್ಯದ ಜನತೆ ತಲೆ ತಗ್ಗಿಸುವಂತೆ ಆಗಿದೆ.

ಇಂತಹ ಆಘಾತಕಾರಿ ಸುದ್ದಿ ರಾಜ್ಯ ಹಾಗೂ ದೇಶದಲ್ಲೆಡೆ ಕಾಳ್ಗಿಚ್ಚಿನಂತೆ ಹರಡುವ ಮೂಲಕ ಬಿ.ಜೆ.ಪಿ ತನ್ನ ಪ್ರತಿಷ್ಠೆಯನ್ನು ಉಳಿಸಿಕೊಳ್ಳಬೇಕೆಂದು ತಪ್ಪಿತಸ್ಥರಿಂದ ಸಚಿವ ಸ್ಥಾನಗಳ ರಾಜೀನಾಮೆ ಪಡೆದು ತಿಪ್ಪೆ ಸಾರಿಸುವ ಬದಲಾಗಿ, ನಾಡು-ನುಡ, ಸಂಸ್ಕೃತಿ, ಪರಂಪರೆ, ಪ್ರಜಾತಂತ್ರ ವ್ಯವಸ್ಥೆಯ ಮೇಲೆ ಬಿ.ಜೆ.ಪಿ ನಂಬಿಕೆ ಹಾಗೂ ಗೌರವ ಇಟ್ಟುಕೊಂಡಿದ್ದೇ ಆದಲ್ಲಿ ದುರ್ಘಟನೆಯಲ್ಲಿ ಪಾಲ್ಗೊಂವರನ್ನು ಶಾಸಕತ್ವ ಸ್ಥಾನದಿಂದ ವಜಾಗೊಳಿಸಬೇಕು.

ಒಂದಿಲ್ಲೊಂದು ಅಪರಾಧದಲ್ಲಿ ಸಿಲುಕಿ ಹಾಕಿಕೊಂಡಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಹರತಾಳು ಹಾಲಪ್ಪ, ರೇಣುಕಾಚಾರ್ಯ, ಕಟ್ಟಾ ಸುಬ್ರಮಣ್ಯ ನಾಯ್ದು, ಸಂಸದ ಬಿ.ವೈ. ರಾಘವೇಂದ್ರ ಅವರನ್ನೂ ಕೂಡ ಪಕ್ಷದಿಂದ ಉಚ್ಛಾಟಿಸಬೇಕೆಂದು ಕರವೇ ಕಾರ್ಯಕರ್ತರು ಆಗ್ರಹಿಸಿ, ತಪ್ಪೆಸಗಿದ ಸವದಿ, ಪಾಟೀಲ ಹಾಗೂ ಪಾಲೇಮಾರ ಅವರ ಪ್ರತಿಕೃತಿಯನ್ನು ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.

ಕರವೇ ತಾಲ್ಲೂಕು ಉಪಾಧ್ಯಕ್ಷ ಶರಣಯ್ಯ ಬಂಡಿ, ಕುಕನೂರು ಘಟಕದ ಅಧ್ಯಕ್ಷ ಪ್ರಕಾಶ ಕಲಾಲ, ಗುದ್ನೆಪ್ಪನಮಠ ಘಟಕದ ರುದ್ರಯ್ಯ ವಿರುಪಣ್ಣವರ, ಯಡಿಯಾಪುರ ಘಟಕದ ಪರಶುರಾಮ ಮ್ಯಾಗೇರಿ, ಚಂದ್ರು ಯಳವತ್ತಿ, ಬಸಯ್ಯ ನಾಗಣ್ಣವರ, ವೀರಯ್ಯ ಹುಣಸಿಮರ, ಗವಿಸಿದ್ದಯ್ಯ ನಿಟ್ಟಾಲಿ, ಖಾದರಸಾಬ ನಿಟ್ಟಾಲಿ, ಹನುಮಂತ ತಿಪ್ಪರಸನಾಳ, ಅರುಣ ಬಡಿಗೇರ ಕಕ್ಕಿಹಳ್ಳಿ, ನಿಂಗಪ್ಪ ನೋಟಗಾರ, ಪ್ರಕಾಶ ವಾಲ್ಮೀಕಿ, ಈರಣ್ಣ ಹಳ್ಳಿಗುಡಿ, ಶರಣಪ್ಪ ಈಳಿಗೇರ, ವೀರೇಶ ಸಾಲಿಮಠ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಪಿ.ಎಸ್.ಐ ಎಚ್.ಗುರುಬಸವರಾಜ ಸೂಕ್ತ ಪೊಲೀಸ್ ಭದ್ರತೆ ಕಲ್ಪಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT