ಕೆ.ಆರ್.ನಗರ: ಶಾಸಕ ಸಾ.ರಾ. ಮಹೇಶ್ ಅವರು ವಿಶ್ವಾಸ ರಾಜ ಕಾರಣಕ್ಕೆ ಯೋಗ್ಯರೂ ಅಲ್ಲ, ಅರ್ಹರೂ ಅಲ್ಲ~ ಎಂದು ಸಂಸದ ಅಡಗೂರು ಎಚ್. ವಿಶ್ವನಾಥ್ ಶುಕ್ರವಾರ ಅಸಮಾಧಾನ ವ್ಯಕ್ತಪಡಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಲ್ಲೂಕಿನಲ್ಲಿ ಮಾಜಿ ಸಚಿವ ಎಸ್.ನಂಜಪ್ಪನವರ ಕಾಲದಿಂದ ವಿಶ್ವಾಸ ರಾಜಕಾರಣ ಮಾಡುತ್ತ ಬಂದಿದ್ದೇವೆ. ಆದರೆ ಶಾಸಕ ಸಾ.ರಾ.ಮಹೇಶ್ ಅದಕ್ಕೆ ವಿರುದ್ಧವಾದವರು. ಸಾ.ರಾ. ಮಹೇಶ್ ಅವರು ಮನಸ್ಸಿಗೆ ಬಂದಂತೆ ಹೇಳಿಕೆ ನೀಡುವುದನ್ನು ಬಿಡಬೇಕು ಎಂದು ಸಲಹೆ ನೀಡಿದ ಅವರು, ದುಡ್ಡಿನ ಧಿಮಾಕು ಬಹಳ ದಿನ ನಡೆಯುವುದಿಲ್ಲ. ಅದರಿಂದ ಬಹಳ ಜನ ಜೈಲಿಗೂ ಹೋಗಿದ್ದಾರೆ ಎಂದರು.
ತಾಲ್ಲೂಕಿನ ಚುಂಚನಕಟ್ಟೆ ಶ್ರೀರಾಮ ಸಕ್ಕರೆ ಕಾರ್ಖಾನೆ ಉಳಿಸಿ ಬೆಳೆಸಿದವರು ಕಾಂಗ್ರೆಸ್ನವರು, ಆದರೆ ಅದನ್ನು ಅಡ ಇಟ್ಟಿರುವವರು ಜೆಡಿಎಸ್ನವರು. ಸಕ್ಕರೆ ಕಾರ್ಖಾನೆ ಗುತ್ತಿಗೆ ಪಡೆದ ಅಂಬಿಕಾ ಶುಗರ್ಸ್ನವರು ಕರಾರಿನಂತೆ ಸರ್ಕಾರಕ್ಕೆ ರೂ.12ಕೋಟಿ ಕಟ್ಟಬೇಕಾಗಿದೆ.